Showing posts with label ಶ್ರೀರಾಮ್. Show all posts
Showing posts with label ಶ್ರೀರಾಮ್. Show all posts

Sunday, August 2, 2009

ಮರೆತೇನೆಂದರು ಮರೆಯಲಿ ಹ್ಯಾಂಗ?

ನಮ್ಮ ದೇಶದಲ್ಲಿ ಮೈಕ್ರೋಫೈನಾನ್ಸ್ ಅಂದಕೂಡಲೇ ಕಾರಣವಿರಲೀ ಇಲ್ಲದಿರಲೀ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಎಸ್.ಕೆ.ಎಸ್ ಎನ್ನುವ ಸಂಸ್ಥೆಯದ್ದು. ಹಾಗೂ ಅದರ ಸಂಸ್ಥಾಪಕ ಅನ್ನಿಸಿಕೊಳ್ಳುವ ವಿಕ್ರಂ ಆಕುಲಾರ ಹೆಸರು. ಎಸ್.ಕೆ.ಎಸ್ [ಸ್ವಯಂ ಕೃಷಿ ಸಂಘಂ] ಬಗ್ಗೆ ಮೊದಲಿಗೆ ಯೋಚಿಸಿದ್ದು ಅದನ್ನು ಕಾರ್ಯರೂಪಕ್ಕೆ ಇಳಿಸಿದ್ದು ವಿಕ್ರಂ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪುಟ್ಟದಾಗಿ ಪ್ರಾರಂಭಿಸಿ ಇಂದು ದೇಶಾದ್ಯಂತ ಹಬ್ಬಿರುವ ಈ ಸಂಸ್ಥೆ ದೇಶದಲ್ಲಿಯೇ ಅತ್ಯಂತ ದೊಡ್ಡ ಮೈಕ್ರೊಫೈನಾನ್ಸ್ ಸಂಸ್ಥೆಯಾಗಿದೆ. ವಿಕ್ರಂಗೂ ಈ ಸಂಸ್ಥೆ ಸಾಕಷ್ಟು ಖ್ಯಾತಿಯನ್ನು ತಂದು ನೀಡಿದೆ. ಅಮೆರಿಕದಿಂದ ಎಲ್ಲವನ್ನೂ ಬಿಟ್ಟು ಭಾರತಕ್ಕೆ ಬಂದು ಬಡವರಿಗೆ ಸೇವೆಯನ್ನೊದಗಿಸುವ ಕೆಲಸ ಮಾಡುತ್ತಿರುವುದಕ್ಕೆ ಟೈಂ ಪತ್ರಿಕೆಯ ನೂರು ಜನರ ಯಾದಿಯಲ್ಲಿ, ವೀಕ್ ಪತ್ರಿಕೆಯ ೨೦ ಮಹತ್ವದ ಭಾರತೀಯರ ಯಾದಿಯಲ್ಲಿ ವಿಕ್ರಂ ಹೆಸರು ದಾಖಲಾದದ್ದಲ್ಲದೇ ದೊಡ್ಡ ವಾರ್ತಾವಾಹಿನಿಗಳಲ್ಲಿ ಆತನ ಸಂದರ್ಶನಗಳೂ ಬಂದಿವೆ. ಆದರೂ ವಿಕ್ರಂ ೧೯೯೭ರಲ್ಲಿ ಪ್ರಾರಂಭಿಸಿ, ಇಷ್ಟೆಲ್ಲಾ ಖ್ಯಾತಿಯನ್ನು ನೀಡಿದ ಸಂಸ್ಥೆಯಲ್ಲಿನ ತಮ್ಮ ಬಹುತೇಕ ಹೂಡಿಕೆಯನ್ನು ಕಳೆದ ವರ್ಷವಷ್ಟೇ ಮಾರಿ ಸಂಸ್ಥೆಯ ದಿನನಿತ್ಯದ ಕಾರ್ಯವನ್ನು ಹೊಸ ಹೂಡಿಕೆದಾರರಿಗೆ ಒಪ್ಪಿಸಿ ಕೈತೊಳೆದುಕೊಂಡರು.

ವಿಕ್ರಂರ ಈ ತ್ವರಿತ ಪ್ರಗತಿಯಾದದ್ದು ಎಸ್.ಕೆ.ಎಸ್ ಸಂಸ್ಥೆಯ ಪ್ರಗತಿಯಿಂದಾಗಿ. ಆದರೆ ನಿಜದ ವಿಷಯವೆಂದರೆ ಎಸ್.ಕೆ.ಎಸ್ ಅತ್ಯಂತ ನಾಜೂಕಾದ ಪರಿಸ್ಥಿತಿಯಲ್ಲಿದ್ದಾಗ ಶೈಶವಾವಸ್ಥೆಯಲ್ಲಿ ಅದನ್ನು ಪೋಷಿಸಿ ಬೆಳೆಸಿದ ವ್ಯಕ್ತಿ ಎಲೆಮರೆಯ ಕಾಯಿಯಂತೆ, ಖ್ಯಾತಿಯನ್ನೂ ಸಂಪಾದಿಸದೇ, ಹೆಚ್ಚು ಹಣವನ್ನೂ ಈ ಸಂಸ್ಥೆಯಿಂದ ಪಡೆಯದೆಯೇ ಮರೆಯಾದರು. ಆ ವ್ಯಕ್ತಿಯ ಹೆಸರು ಸೀತಾರಾಮ್ ರಾವ್.

ಸೀತಾರಾಮ್ ಸದಾ ಹಸನ್ಮುಖಿಯಾಗಿ ಇರುತ್ತಿದ್ದ ವ್ಯಕ್ತಿ. ಅವರಲ್ಲಿ ಎಂದೂ ತುಳುಕುತ್ತಿದ್ದ ಉತ್ಸಾಹ, ಹಾಗೂ ಕುತೂಹಲ. ಮೇಲಾಗಿ ಬಡತನದ ಕ್ಷೇತ್ರದಲ್ಲಿ ಕೆಲಸ ಮಾಡುವವರು ದೊಡ್ಡ ಮಾತುಗಳ ಭಾಷಣವನ್ನು ಕೊಚ್ಚುವ ರೋಗ ಅವರಿಗೆ ಇರಲೇ ಇಲ್ಲ. ಅವರು ಎಷ್ಟರ ಮಟ್ಟಿಗೆ ಬಡವರ ಪರವಾದ - ಮಕ್ರೋಫೈನಾನ್ಸ್ ಕ್ಷೇತ್ರದ ಪರವಾದ ಮಾತುಗಳನ್ನಾಡುತ್ತಿದ್ದರು ಎಂದರೆ ಬಹುಮಟ್ಟಿನ ಜನರು ಅವರನ್ನು ಎಸ್.ಕೆ.ಎಸ್ ಸಂಸ್ಥೆಯ ಜೊತೆಗೆ ಗುರುತಿಸದೇ, ಗ್ರಾಮೀಣ ಅರ್ಥಪದ್ಧತಿಯ ಜೊತೆಗೆ ಆತನನ್ನು ಗುರುತಿಸುತ್ತಿದ್ದರು.

ಎಸ್.ಕೆ.ಎಸ್ ಸ್ಥಾಪಿಸಿದ ವಿಕ್ರಂ ಆಕುಲಾ ಒಂದು ಘಟ್ಟದಲ್ಲಿ ಅದನ್ನು ಹೆಚ್ಚೂ ಕಡಿಮೆ ಬಿಟ್ಟು ತಮ್ಮ ಉನ್ನತ ಪದವಿಗಾಗಿ ಶಿಕಾಗೋಗೆ ವಾಪಸ್ಸಾದಾಗ ನಾವೆಲ್ಲಾ ವಿಕ್ರಂ ಎಸ್.ಕೆ.ಎಸ್.ನಿಂದ ಕೈತೊಳೆದುಕೊಂಡುಬಿಟ್ಟಿದ್ದಾರೆ ಅಂದುಕೊಂಡಿದ್ದೆವು. ಆ ಕಾಲದಲ್ಲಿ ವಿಕ್ರಂ ಎಸ್.ಕೆ.ಎಸ್‌ನ ಉಸ್ತುವಾರಿಯನ್ನು ಸೀತಾರಾಮ್ ಕೈಗೆ ಇಟ್ಟು ಹೋದರು. ವಿಕ್ರಂ ತಮ್ಮ ಮಹಾಪ್ರಬಂಧ ಮುಗಿಸಿಬರುವ ವೇಳೆಗೆ ಆ ಸಂಸ್ಥೆ ಬೆಳೆದು ನಿಂತಿತ್ತು. ವಿಕ್ರಂ ಹಾಗೆ ಬೆಳೆದು ನಿಂತಿದ್ದ ಸಂಸ್ಥೆಯನ್ನು ಇನ್ನೂ ತ್ವರಿತಗತಿಯಲ್ಲಿ ಬೆಳೆಸಿದರೂ ಅದರ ಅಡಿಪಾಯವನ್ನು ಸೀತಾರಾಮ್ ಹಾಕಿದರು ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ವಿಕ್ರಂ ಕೊಟ್ಟಿರುವ ಅಸಂಖ್ಯ ಸಂದರ್ಶನಗಳಲ್ಲಿ ಸೀತಾರಾಮ್ ಹೆಸರನ್ನು ಎತ್ತಿರುವುದನ್ನು ನಾನು ಕಂಡೇ ಇಲ್ಲ. ಆದರೆ ಸೀತಾರಾಂ ಮಾತ್ರ ತಾವು ಆ ಸಂಸ್ಥೆಯಿಂದ ಹೊರಬಿದ್ದಾಗ ಎಲ್ಲರಿಗೂ ಕಳಿಸಿದ ಒಂದು ಪತ್ರದಲ್ಲಿ ತಮ್ಮೊಡನೆ ಇದ್ದ ಪ್ರತೀ ವ್ಯಕ್ತಿಯನ್ನೂ ಅವರ ಪಾತ್ರದ ಮಹತ್ವವನ್ನೂ ವಿವರಿಸಿದ್ದರು.

ಒಂದು ರೀತಿಯ ಸ್ಥಿತಪ್ರಜ್ಞತೆಯನ್ನು ಮೈಗೂಡಿಸಿಕೊಂಡಿದ್ದ ಸೀತಾರಾಮ್ ಹಿಂದೆ ನೋಡಿ ಬೇಸರ ಪಟ್ಟುಕೊಳ್ಳುವ ವ್ಯಕ್ತಿಯಲ್ಲ. ಅವರು ಎಸ್.ಕೆ.ಎಸ್. ಬಿಟ್ಟಾಗ ಹೇಳಿದ್ದ ಮಾತುಗಳಲ್ಲಿ ಮುಖ್ಯವಾದದ್ದು "ಬಡವರ ಆಹಾರ ಸ್ವಾವಲಂಬನೆಯ ಬಗ್ಗೆ ನಾನು ಮುಂದಿನ ಕೆಲಸ ಮಾಡಬೇಕೆಂದಿದ್ದೇನೆ" ಎಂದು ಬರೆದಿದ್ದರು.

ಈಗ ಕೂತು ಸೀತಾರಾಮ್ ಬಗ್ಗೆ ಬರೆಯುತ್ತಿರುವಾಗ ನನಗೆ ಎಷ್ಟೆಲ್ಲಾ ವಿವರಗಳು ನೆನಪಾಗುತ್ತಿವೆ. ಒಂದು ಸೀತಾರಾಮ್ ಅವರ ಒಂದೂ ಫೋಟೋ ನನ್ನ ಬಳಿಯಿಲ್ಲ. ಎರಡು: ಸೀತಾರಾಮ್ ಅವರ ಜೀವನದ ಖಾಸಗೀ ವಿವರಗಳು ಒಂದೂ ನನಗೆ ತಿಳಿದಿಲ್ಲ - ಅವರಿಗೆ ಮದುವೆಯಾಗಿದೆಯೋ, ಸ್ವಂತ ಮನೆಯಿದೆಯೋ, ಈ ಹಿಂದೆ ಏನು ಮಾಡುತ್ತಿದ್ದರು - ಯಾವುದೂ ಗೊತ್ತಿಲ್ಲ.

ಯಾಕೆಂದರೆ ಸೀತಾರಾಮ್ ನಮ್ಮೆದುರಿಗೆ ಒಂದು ಸಂಪೂರ್ಣ ವ್ಯಕ್ತಿಯಾಗಿ ನಿಲ್ಲುತ್ತಿದ್ದರು. ಹೀಗಾಗಿ ಈ ಎಲ್ಲ ವಿವರಗಳ ಆಸರೆ ಅವರ ವ್ಯಕ್ತಿತ್ವಕ್ಕೆ ಬೇಕಿರಲಿಲ್ಲ. ನಾನಿಂಥವನ ಮಗ, ಇಂಥವನ ಗಂಡ, ಇಂಥಿಂಥ ಕಡೆ ಕೆಲಸ ಮಾಡಿದೆ.. ಯಾವುದೂ ಈ ಕ್ಷಣದ ಕೆಲಸಕ್ಕೆ ಮುಖ್ಯವಲ್ಲ. ಈ ಕ್ಷಣದ ಕೆಲಸಕ್ಕೆ ಮುಖ್ಯವಾದದ್ದು - ಕೈಮೇಲಿರುವ ಸಮಸ್ಯೆಯನ್ನು ಸಾಧಿಸುವ ಬಗೆ ಹೇಗೆ ಅನ್ನುವುದರ ಆಲೋಚನೆ ಮಾತ್ರ. ಇದರಿಂದಾಗಿ ನನಗೆ ಖ್ಯಾತಿ ಬರುತ್ತದೋ ಇಲ್ಲವೋ ಅನ್ನುವುದು ಮುಖ್ಯವಲ್ಲ - ಸಮಸ್ಯೆ ಪರಿಹಾರವಾಯಿತೋ ಇಲ್ಲವೋ ಅನ್ನುವುದು ಮುಖ್ಯ...

ಬಹುಶಃ ಸೀತಾರಾಮ್ ಈ ಥರದ ಆಲೋಚನೆಗಳಲ್ಲಿ ತೊಡಗಿದ್ದಿರಬಹುದು. ಮುಂಬೈನಲ್ಲಿ ಆರ್ಟ್ ಪ್ಲಾಜಾ ಮಾಡಿ, ಉದಯೋನ್ಮುಖ ಕಲಾವಿದರಿಗೆ ಜಹಾಂಗೀರ್ ಆರ್ಟ್ ಗ್ಯಾಲರಿಯೆದುರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟ ಕಮಲಾಕ್ಷ ಶಣೈ, ಅನೇಕ ಜನರ ಸಾಹಿತ್ಯ ಕೃತಿಗಳನ್ನು ಬೆಳಕಿಗೆ ತರಲು, ಕವಿಗಳನ್ನು ಕಾಲೇಜಿನ ಹಂತದಲ್ಲಿಯೇ ಗುರುತಿಸಿ ಪ್ರ್ಹೊತ್ಸಾಹಿಸಿದ ಕ್ರೈಸ್ಟ್ ಕಾಲೇಜಿನ ಶ್ರೀನಿವಾಸ ರಾಜು ಈ ಎಲ್ಲರಲ್ಲೂ ಕೆಲವು ಸಮಾನವಾದ ಗುಣಗಳಿದ್ದುವು. ಎಲ್ಲರೂ ಮಿತಭಾಷಿಗಳು. ಎಲ್ಲರೂ ತಮ್ಮ ಖ್ಯಾತಿ ಹೆಸರಿನ ಬಗ್ಗೆ ಯೋಚಿಸಿದವರೇ ಅಲ್ಲ. ತಾವು ನಂಬಿದ್ದನ್ನು ತಮ್ಮ ಕಾಯಕವೆಂದು ಕೈಗೊಂಡು ಸಮಾಜಕ್ಕೆ ಪ್ರಯೋಜನವಾಗುವಂತೆ ಜೀವಿಸಿದವರು. ಈ ಹಲವರ ಜೊತೆಗೆ, ಎಲೆ ಮರೆಯ ಕಾಯಿಯಾಗಿ ಭುಜಕ್ಕೆ ಭುಜ ಸೇರಿಸಿ ಸೀತಾರಾಮ್ ನಿಂತಿದ್ದಾರೆ.

ಒಂದು ತಿಂಗಳ ಕೆಳಗಷ್ಟೇ ಚೆನ್ನೈನಲ್ಲಿ ಸೀತಾರಾಮ್ ಅವರ ಭೇಟಿಯಾಗಿತ್ತು. ನಾಲ್ಕಾರು ತಿಂಗಳುಗಳಿಂದ ನಾಪತ್ತೆಯಾಗಿದ್ದ ಸೀತಾರಾಮ್ ಸಾವಿನ ಅಂಚಿನಲ್ಲಿದ್ದ ತಮ್ಮ ಸಹೋದರನ ಪರಿಚಾರಿಕೆಯಲ್ಲಿದ್ದರಂತೆ. ಎಲ್ಲ ಡಾಕ್ಟರುಗಳೂ ಕೈ ಎತ್ತಿದ್ದ, ಕೋಮಾದಲ್ಲಿದ್ದ ತಮ್ಮ ಸಹೋದರನ ಜೀವವನ್ನು ವಾಪಸ್ಸು ಎಳೆದು ತಂದ ನಂತರವೇ ನಾನು ನನ್ನ ಕೆಲಸಕ್ಕೆ ವಾಪಸ್ಸಾದೆ ಎಂದು ಅವರು ಹೇಳಿದರು. ಹಳೆಯ ಕಥೆಗಳಲ್ಲಿರುವಂತೆ ಬಹುಶಃ ತಮ್ಮು ಆಯಸ್ಸನ್ನು ತಮ್ಮ ಸಹೋದರನಿಗೆ ಎರೆದು ಬಿಟ್ಟರೇನೋ. ಆದರೆ ಆ ಸಂದರ್ಭ ಸೀತಾರಾಮ್‍ಗೆ ತೃಪ್ತಿ ತಂದ ಸಂದರ್ಭವಿದ್ದಿರಬಹುದು. ಯಾಕೆಂದರೆ ಅಮಿತವಾಗಿ ಬದಲಾವಣೆಗಳನ್ನು ಕಾಣುವ ತಪನವಿರುವವರಲ್ಲೆಲ್ಲಾ ಒಂದು ಬದಲಾವಣೆಯ ಚಡಪಡಿಕೆಯನ್ನು ನಾವು ಕಾಣುತ್ತೇವೆ. ಒಂದು ಥರದ ತೀವ್ರತೆಯನ್ನು ಕಾಣುತ್ತೇವೆ. ಆದರೆ ಈ ಕ್ಷೇತ್ರದಲ್ಲಿ ಸ್ಥಿತಪ್ರಜ್ಞರಂತೆ ಕಾಣುವ, ಅತೃಪ್ತರಾಗಿದ್ದೂ ತೃಪ್ತರಂತೆ ಕಾಣುವ ಗಾಂಭೀರ್ಯ ಸೀತಾರಾಮ್‌ಗೆ ಇತ್ತು. ಆ ಥರದ ಗಾಂಭೀರ್ಯ ಇರುವ ಮತ್ತೂಬ್ಬರೆಂದರೆ ಸೇವಾ ಸಂಸ್ಥೆಯ ಇಳಾ ಭಟ್.

ಚೆನ್ನೈನಲ್ಲಿ ನಡೆದ ಅಂದಿನ ಕಾರ್ಯಕ್ರಮ ಆತನಿಗೆ ತೃಪ್ತಿ ನೀಡಿದ್ದಿರಬೇಕು. ಸೀತಾರಾಮ್ ಮಾತನಾಡುತ್ತಿದ್ದ ಆಹಾರ ಸ್ವಾವಲಂಬನೆಯತ್ತ ಒಂದು ಹೆಜ್ಜೆಯನ್ನಿಡುತ್ತಾ ಚೆನ್ನೈನ ಈಕ್ವಿಟಾಸ್ ಮೈಕ್ರೋಫೈನಾನ್ಸ್ ಸಂಸ್ಥೆ ತಮ್ಮ ಬಡ ಗ್ರಾಹಕರಿಗೆ ಲಾಭವಿಲ್ಲದೇ - ಸುಲಭ ಕಂತಿನ ಮೇಲೆ ಆಹಾರ ಪದಾರ್ಥಗಳನ್ನು ಪೂರೈಸುಯ ಯೋಜನೆಯ ಅಡಿಪಾಯವನ್ನು ಹಾಕಿತ್ತು. ಇದು ಸೀತಾರಾಮ್ ಹೇಳಿದ್ದರಿಂದಲೇ ನಾವು ಮಾಡಿದೆವು ಅನ್ನುವ ನಿಜವನ್ನೂ ಈಕ್ವಿಟಾಸ್ ಸಂಸ್ಥೆಯ ವಾಸು ಹೇಳಿದ್ದರು. ಹೀಗಾಗಿ ತಮ್ಮ ಕನಸಿನ ಒಂದು ಭಾಗವಾದರೂ ಸಾಕಾರಗೊಳ್ಳುತ್ತಿರುವುದನ್ನು ಕಂಡು ಸೀತಾರಾಮ್ ಅಸುನೀಗಿದರು ಅನ್ನುವುದೇ ಒಂದು ತೃಪ್ತಿ.

ನಮ್ಮ ಸಂಸ್ಥೆಯಲ್ಲಿ ಒಂದು ಸೆಮಿನಾರಿಗೆ ನಾವು ಸೀತಾರಾಮನ್ನು ಕರೆಸಿದ್ದೆವು. ದಿನವಿಡೀ ಎಲ್ಲರೂ ಮಾತು ಚರ್ಚೆಯಲ್ಲಿ ಪಾಲ್ಗೊಂಡರು. ಸೀತಾರಾಮ್ ಮಾತ್ರ ತಮ್ಮ ಎಡಗೈಯಲ್ಲಿ ಪ್ಯಾಡಿನಲ್ಲಿ ಟಿಪ್ಪಣಿ ಹಾಕಿಕೊಳ್ಳುತ್ತಿದ್ದರು. ಎಲ್ಲ ಆದ ಮೇಲೆ ಸಂಜೆಗೆ ನಾನು ಆತನನ್ನು ಕೇಳಿದೆ: "ನೀವು ಒಂದೂ ಮಾತನ್ನು ಆಡಲಿಲ್ಲವಲ್ಲಾ?" ಅದಕ್ಕೆ ಸೀತಾರಾಮ್ ಎಂದಿನ ನಗೆ ನಕ್ಕು "ಇಷ್ಟೊಂದು ಜನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು, ಅದನ್ನು ನೋಡಿ ನಾನು ಕಲಿಯುತ್ತಾ, ಏನೆಲ್ಲಾ ಮಾಡಬಹುದೆಂದು ಟಿಪ್ಪಣಿ ಹಾಕಿಕೊಳ್ಳುತ್ತಾ ಇದ್ದೆ, ಈ ಎಲ್ಲರ ನಡುವೆ ನಾನು ಹೇಳಿಕೊಳ್ಳುವುದೇನಿದೆ. ಇನ್ನೂ ಮಾಡಬೇಕಾದ ಕೆಲಸ ಬಹಳವಿದೆ" ಎಂದಿದ್ದರು.

ಪಿಕ್ಚರ್ ಅಭೀ ಬಾಕೀ ಹೈ ಮೇರೇ ದೋಸ್ತ್....




Sunday, March 15, 2009

ಕುರಿಯನ್: ಒಂದು ಖಾಸಗೀ ಪ್ರಬಂಧ



[ವಿಜಯಕರ್ನಾಟಕದ ಕೋರಿಕೆಯ ಮೇರೆಗೆ ನಾನು ಈ ಲೇಖನವನ್ನ ಬರೆದೆ. ಆದರೆ, ಎಲ್ಲ ಪತ್ರಿಕೆಗಳಿಗೂ ಇರುವ ಸ್ಥಳ ಪರಿಮಿತಿಗನುಸಾರವಾಗಿ, ಈ ಪ್ರಬಂಧದ ಆಯ್ದ ಭಾಗಗಳನ್ನು ಮಾತ್ರ ಅವರು ೨೧ ಮೇ ೨೦೦೬ರ ಭಾನುವಾರದ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ. ಈ ಲೇಖನವನ್ನು ನಾನು ಕನ್ನಡದಲ್ಲಿ ಬರೆಯಲು ಸ್ವಲ್ಪ ತಿಣುಕಿದೆ - ಕುರಿಯನ್ ಭಾಷಣಗಳನ್ನು ಮಾತುಗಳನ್ನು ಇಂಗ್ಲೀಷಿನಲ್ಲಿ ಕೇಳಿದ್ದ ನನಗೆ ಆತನ ಬಗ್ಗೆ ನನಗೆ ಕನ್ನಡದಲ್ಲಿ ಯಾವಮಾತನ್ನೂ ಬರೆಯುವುದು ಯಾಕೋ ಕಷ್ಟವಾಯಿತು. ಹೀಗಾಗಿ ನಾನು ಈ ಲೇಖನವನ್ನು ಮೊದಲಿಗೆ ಇಂಗ್ಲೀಷಿನಲ್ಲಿ ಬರೆದು ನಂತರ ಕನ್ನಡಕ್ಕೆ ತರ್ಜುಮೆ ಮಾಡಿದೆ. ಈ ಬಿಕ್ಕಟ್ಟನ್ನು ನಾನು ಎದುರಿಸಿದ್ದು ಇದೇ ಮೊದಲು. ಒಂದು ವಿಧದಲ್ಲಿ ಇದೂ ಒಳ್ಳೆಯದೇ ಆಯಿತು. ಕನ್ನಡ ಬರದ ನನ್ನ ಇರ್ಮಾದ ಗೆಳೆಯರೊಂದಿಗೆ ಈ ಲೇಖನವನ್ನು ಹಂಚಿಕೊಳ್ಳಲು ಸಾಧ್ಯವಾಯಿತು] 

ಕಾಲೇಜು ತಪ್ಪಿಸಿ ಮೈಸೂರಿನ ಒಲಿಂಪಿಯಾ ಟಾಕೀಸಿನಲ್ಲಿ 'ಮಂಥನ್' ಚಿತ್ರ ನೋಡಿದಾಗ ನಾನು ಪಿ.ಯು.ಸಿ.ಯಲ್ಲಿದ್ದೆ. ಆಗ್ಗೆ ನನಗೆ ಇದು ನಾನು ನೊಡುತ್ತಿದ್ದ ಚಿತ್ರಗಳಲ್ಲಿ ಮತ್ತೊಂದಾಗಿತ್ತು - ಶ್ಯಾಂ ಬೆನೆಗಲ್ ನಿರ್ದೇಶಿಸಿದ ಒಪ್ಪ ಕಥೆಯ ಒಳ್ಳೆಯ ಸಿನೇಮಾ. ಆಗ್ಗೆ ನಾನು ಶ್ಯಾಂ ಬೆನೆಗಲ್‍ರ ಚಿತ್ರಗಳನ್ನು ಮೆಚ್ಚಲು ಆರಂಭಿಸಿದ್ದೆ. ನಿಶಾಂತ್, ಅಂಕುರ್ ಥರದ ಚಿತ್ರಗಳನ್ನು ಮಾಡಿದ್ದ ಶ್ಯಾಂ ಮಾರುಕಟ್ಟೆಯಲ್ಲಿ ಯಶಸ್ವಿಯಾಗುವಂಥಹ ಚಿತ್ರ ಮಾಡಿದ್ದು ನನಗೆ ತುಸು ಆಶ್ಚರ್ಯವನ್ನೇ ಉಂಟುಮಾಡಿತ್ತು. ಈ ಚಿತ್ರ ನನ್ನ ಜೀವನದಲ್ಲಿ ದೊಡ್ಡ ಪ್ರಭಾವವಾಗಬಹುದು, ನನ್ನ ವೃತ್ತಿ ಜೀವನವನ್ನು ರೂಪಿಸಬಹುದೆಂದು ಆಗ ನಾನು ಊಹಿಸಿರಲಿಲ್ಲ.

ಮೂರ್ನಾಲ್ಕು ವರ್ಷಗಳನಂತರ [ಬಹುಶಃ ೩೧ ಜನವರೆ ೧೯೮೨ ರಂದು] ನನಗೆ ಒಂದು ಕಷ್ಟದ ಆಯ್ಕೆ ಎದುರಾಯಿತು. ಅಂದು ನಾನು ಇನ್ಸ್‌ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‍ಮೆಂಟಿನ [ಇರ್ಮಾ] ಪ್ರವೇಶ ಪರೀಕ್ಷೆ ಮತ್ತು ಕಾಲೇಜಿನಿಂದ ನಾವು ಹೋಗಬೇಕಾದ ಪ್ರವಾಸದ ನಡುವೆ ಆಯ್ಕೆ ಮಾಡಬೇಕಾಗಿತ್ತು. ಡಿಗ್ರಿಯ ಅಂತಿಮ ವರ್ಷದಲ್ಲಿದ್ದದ್ದರಿಂದ ನಾವುಗಳು [ಸಂತೋಷವಾಗಿ] ಜೊತೆಯಾಗಿರುವ ಕಡೆಯ ದಿನ ಅದೇ ಆಗುವುದಿತ್ತು. ಆಗಷ್ಟೇ ಬರವಣಿಗಯನ್ನು ಪ್ರಾರಂಭಿಸಿದ್ದ ನಾನು ಆ ಸಂಸ್ಥೆಯ ಹೆಸರನಿಲ್ಲಿದ್ದ ರೂರಲ್ ಎಂಬ ಪದಕ್ಕೆ ಮಾರುಹೋದೆನೆನ್ನಿಸುತ್ತದೆ. ಹಳ್ಳಿಗಳ ಕಡೆ ಓಡಾಡಿದರೆ ಕಥೆಗಾರನಿಗೆ ಬೇಕಾದ ಅನುಭವಗಳು ಸಿಕ್ಕು ನನ್ನ ಬರವಣಿಗೆ ಶ್ರೀಮಂತವಾಗುವುದು ಎಂಬ ಭಾವನೆ ನನ್ನಲ್ಲಿತ್ತು. ಆಗ ಮ್ಯಾನೇಜ್‍ಮೆಂಟ್ ಓದಿಗೆ ಈಗಿನಷ್ಟು ಪ್ರಾಮುಖ್ಯತೆಯಿರಲಿಲ್ಲ ಆದರೂ ಆಕರ್ಷಕವಾಗಿತ್ತು. ಹೀಗಾಗಿ ವೃತ್ತಿಯ ದೃಷ್ಟಿಯಿಂದ ರೂರಲ್ ಅಷ್ಟು ಆಕರ್ಷಕವಲ್ಲದಿದ್ದರೂ ಮ್ಯಾನೇಜ್‍ಮೆಂಟ್ ಎಂಬ ಕವಚ ಇತ್ತು. ಇರ್ಮಾದ ಜಾಹೀರಾತಿನ ಪ್ರಕಾರ ಕೋರ್ಸ್ ಮುಗಿದ ನಂತರ ತಿಂಗಳಿಗೆ ೧೨೦೦ ರೂಪಾಯಿಯ ಸಂಬಳದ ಕೆಲಸದ ಭರವಸೆ ಮತ್ತು ಓದುವಾಗ ತಿಂಗಳಿಗೆ ೬೦೦ ರೂಪಾಯಿಯ ಭತ್ತೆ ಕೊಡುವ ಮಾತಿತ್ತು. ನಾನು ಇರ್ಮಾ ಸೇರುವ ಬಗ್ಗೆ ಗಂಭೀರವಾಗಿ ಯೋಚಿಸಲು ಇಷ್ಟು ಸಾಕಾಗಿತ್ತು.

ಇರ್ಮಾ ಸೇರುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಪ್ರಧಾನ ಮಂತ್ರಿ ಶ್ರೀಮತಿ ಗಾಂಧಿ ಅಲ್ಲಿನ ಪ್ರಥಮ ಘಟಿಕೋತ್ಸವನ್ನ ಉದ್ದೇಶಿಸಿ ಮಾತನಾಡಿದ್ದನ್ನು ದೂರದರ್ಶನದಲ್ಲಿ ನೋಡಿದ್ದೆ. ಘಟಿಕೋತ್ಸವಕ್ಕೆ ಆನಂದ್‍ನಲ್ಲಿ ನಡೆಯುತ್ತಿದ್ದ ಯಾವುದೇ ಕಾರ್ಯಕ್ರಮದ ಶೈಲಿಯಲ್ಲಿ ಸಾವಿರಾರು ರೈತರು ಬಂದಿದ್ದದ್ದನ್ನು ವರದಿ ಮಾಡಲಾಗಿತ್ತು. ಇದೆಲ್ಲದರ ಅರ್ಥ ಇರ್ಮಾ ಇಂದು ತೆರೆದು ನಾಳೆ ಮುಚ್ಚುವಂತಹ ಜಾಗವಲ್ಲವೆಂದಾಗಿತ್ತು. ನನ್ನ ಆನಂದದ ಪ್ರಯಾಣ ಈ ಹಿನ್ನೆಲೆಯಲ್ಲಿ ನಾನು ಕೈಗೊಂಡಿದ್ದೆ.

ಆನಂದ್ ಸೇರಿದಾಗ ಮತ್ತೆ ಮಂಥನ್ ನೋಡುವ ಅವಕಾಶ ದೊರೆಯಿತು. ಹಾಗೂ ಆ ಚಿತ್ರ ನನಗೆ ಹೊಸ ಅರ್ಥಗಳನ್ನು ಒದಗಿಸಿತು. ನಾವು ಎನ್‍ಡಿಡಿಬಿ ಕ್ಯಾಂಪಸ್ಸಿನ 'ರೈತರ ಹಾಸ್ಟೆಲ್ನಲ್ಲಿ' ವಾಸ್ತವ್ಯ ಹೂಡಬೇಕೆಂದು ಕೇಳಿದಾಗ ಅಲ್ಲಿನ ವಸತಿ ಸಾಮಾನ್ಯದ್ದಿರಬಹುದೆಂದು ನಿರೀಕ್ಷಿಸಿದ್ದೆವು. ಆದರೆ ಆ ವಸತಿಗಳಲ್ಲಿ ಎಲ್ಲ ಆಧುನಿಕ ಸವಲತ್ತುಗಳಿದ್ದದ್ದು ಕಂಡು ಸಂತೋಷವಾಗಿತ್ತು. ಅಷ್ಟೇ ಅಲ್ಲ ಆಗ ಇರ್ಮಾದ ಅಧ್ಯಕ್ಷರಾದ ಕುರಿಯನ್ ಹೇಳಿದ್ದು ಈ ಮಾತುಗಳು: "ಮಹಾರಾಜರು ಲಾಯಗಳಲ್ಲಿ ಬದುಕುವುದಿಲ್ಲ. ನೀವುಗಳೆಲ್ಲ ನನ್ನ ಯುವರಾಜರು. ನನ್ನಂತಹ ಸಾವಿರಾರು ಕುರಿಯನ್‍ಗಳನ್ನು ಜಗತ್ತಿಗೆ ದೇಣಿಗೆಯಾಗಿ ನೀಡಲೆಂದೇ ನಾನು ಈ ಜಾಗ ಕಟ್ಟಿಸಿದ್ದೇನೆ. ನಿಮ್ಮಿಂದ ಆಗಬಹುದಾದ ಬದಲಾವಣೆಗಳನ್ನು ಊಹಿಸಿ ನೋಡಿ.....

ಕುರಿಯನ್ ಮಾತು ಮಾತ್ರವಲ್ಲ, ನಮ್ಮ ಮೇಷ್ಟರುಗಳ, ಎನ್‍ಡಿಡಿಬಿಯ ಅಧಿಕಾರಿಗಳ ವರ್ತನೆಯೂ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿತ್ತು. ಆ ಎರಡು ವರ್ಷಗಳಲ್ಲಿ ಕುರಿಯನ್ ನಮಗೆ ನೀಡಿದ ಕನಸನ್ನು ತಮ್ಮದೇ ರೀತಿಯಲ್ಲಿ ನನಸಾಗಿಸಲು ಪ್ರಯತ್ನಿಸಿದ [ಕಡೆಗೆ ಉಲ್ಫಾದವರ ಹಿಂಸೆಗೆ ಬಲಿಯಾದ] ಸಂಜಯ್ ಘೋಷ್, ಈ-ಚೌಪಾಲ್ ಬಗ್ಗೆ ಆಲೋಚಿಸಿದ ಶಿವಕುಮಾರ್ ಜೊತೆಯ ಒಡನಾಟದ ಅವಕಾಶಗಳನ್ನು ಆ ಜಾಗ ನನಗೆ ನೀಡಿತ್ತು. ಆ ದಿನಗಳಲ್ಲಿ ಸೋವಿಯತ್ ರಾಷ್ಟ್ರ ಇನ್ನೂ ಜೀವಂತವಾಗಿತ್ತು, ಎಡಪಂಥೀಯರಾಗಿರುವುದು, ಸಿಗರೇಟ್ ಸೇದುವುದು, ಜೋಳಿಗೆ ನೇತಾಡಿಸಿಕೊಂಡು ಓಡಾಡುವುದು ಸಹಜವೂ, ವೈಶಿಷ್ಟ್ಯಪೂರ್ಣವೂ ಆಗಿತ್ತು. ಜೋಳಿಗೆಯ ಮೇನೇಜ್‍ಮೆಂಟ್ ಆವೃತ್ತಿ ಅಂದರೆ ಜವಾಜಾದ ತೊಗಲಿನ ಜೋಳಿಗೆ.. ಅದರಲ್ಲಿ ಮ್ಯಾನೇಜ್‍ಮೆಂಟ್ ಓದಿನ, ಸಾಮಾಜಿಕ ಕಳಕಳಿಯ ಒಂದು ಅದ್ಭುತ ಮಿಶ್ರಣವನ್ನು ನಾವು ಕಾಣಬಹುದಿತ್ತು.

ನಮಗೆಲ್ಲಾ ಕುರಿಯನ್ ಅನಂತ ಸಾಧ್ಯತೆಗಳ ಪ್ರತೀಕವಾಗಿದ್ದರು. ಅತಿ ಕಷ್ಟಕರವಾದ ಪರಿಸ್ಥಿತಿಗಳಲ್ಲಿ ಆನಂದದಲ್ಲಿ ಉಳಿದು ಅಲ್ಲಿನ ಸಂಸ್ಥೆಯನ್ನು ಬೆಳೆಸಿದ, ಅವಶ್ಯಕತೆಯನ್ನು ಒಂದು ಅವಕಾಶದಂತೆ ಗ್ರಹಿಸಿ ಅದರಲ್ಲಿ ಉತ್ತೀರ್ಣರಾದ ವ್ಯಕ್ತಿಯಾಗಿ ನಮಗೆ ಕಂಡಿದ್ದರು. ಅವರ ನಡಾವಳಿಯಲ್ಲಿ ಅತಿರೇಕವಿತ್ತು, ಆತ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರು ಮತ್ತು ಆತನ ಮಾತಿನ ತೀಕ್ಷ್ಣತೆಯನ್ನು ಕಂಡು ನಾವು ನಡುಗುತ್ತಿದ್ದೆವು. ಉಚ್ಚ ಜಾತಿಯಲ್ಲಿ ಹುಟ್ಟಿದ ಬ್ರಾಹ್ಮಣ ಹಾಲಿನ ಸರಬರಾಜಿಗೆ ದಲಿತ-ಹರಿಜನನ ಹಿಂದೆ ಕ್ಯೂನಲ್ಲಿ ನಿಂತರೆ ಅದರ ಪ್ರತೀಕವೇನು? ಎಂದು ಗುಡುಗಿ "ಇದು ಜಾತಿವ್ಯವಸ್ಥೆಯ ಕೆನ್ನೆಗೆ ತೀಡಿದಂತಲ್ಲವೇ?" ಎಂದು ಕೇಳಿದಾಗ ನಮ್ಮ ಕಣ್ಣುಗಳಲ್ಲಿ ನೀರು ಬಂದಿತ್ತು.

ಈ ಕೆಳಗಿನ ಘಟನೆಯ ಬಗ್ಗೆ ನಾನು ಕೇಳಿದ್ದೆ. ಕೇರಳದ ಅರ್ಥಶಾಸ್ತ್ರದ ಪ್ರೊಫೆಸರ್ ಒಬ್ಬರು [ಹೆಸರು ಸಿ.ಟಿ. ಕುರಿಯನ್] ತಮ್ಮನ್ನು ಡಾ. ಕುರಿಯನ್‍ಗೆ ಪರಿಚಯ ಮಾಡಿಕೊಂಡರಂತೆ: “ಹಲೋ ನಾನು ಸಿ.ಟಿ.ಕುರಿಯನ್" ಅದಕ್ಕೆ ಈತನ ಉತ್ತರ "ನಾನು ವಿ.ಕುರಿಯನ್.. ವಿಲೇಜ್ ಕುರಿಯನ್" ಅಂತ ಸಿಟಿಯ ಮೇಲೆ ಶ್ಲೇಶೆ ಒಗೆದರಂತೆ.

ಇರ್ಮಾದಲ್ಲಿ ವಿದ್ಯಾಭ್ಯಾಸ ಮಾಡಿ, ನಂತರ ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸ ಮಾಡಲು ನಿರ್ಧರಿಸಿದ ನನಗೆ ಕುರಿಯನ್ ಅವರ ಛತ್ರಛಾಯೆ ಎರಡು ವರ್ಷಗಳಿಗೆ ಸೀಮಿತವಾಗಲಿಲ್ಲ. ನಾವು ಅಲ್ಲಿ ಸೇರಿದಾಗ ಕುರಿಯನ್ ಹೇಳಿದ್ದು ನೆನಪಿದೆ: "ಇಲ್ಲಿಂದ ಪಾಸಾದವರಲ್ಲಿ ಕೇವಲ ೫% ವಿದ್ಯಾರ್ಥಿಗಳು ಗ್ರಾಮೀಣ ಕ್ಷೇತ್ರದಲ್ಲಿ ಕೆಲಸ ಮಾಡಲು ಮುಂದುವರೆದರೆ ಸಾಕು ನಾನು ಈ ಸಂಸ್ಥೆಯನ್ನು ಸ್ಥಾಪಿಸಿದ್ದರ ಉದ್ದೇಶ ಸಫಲಗೊಂಡಂತೆಯೇ." ನಾನು ಆ ೫% ವ್ಯಕ್ತಿಗಳಲ್ಲಿ ಒಬ್ಬ ಎಂದು ಅಂದೂ ಇಂದೂ ನಾನು ನಂಬಿದ್ದೇನೆ. ನಾನಷ್ಟೇ ಅಲ್ಲ, ನನ್ನ ಸಮಯದಲ್ಲಿ ಓದಿದ ೫೦%ದಷ್ಟು ಮಂದಿ ಇನ್ನೂ ಗ್ರಾಮೀಣ/ವಿಕಾಸ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿದು ಕುರಿಯನ್‍ಗೆ ಖುಷಿಯಾದೀತು. ೯೦ರ ದಶಕದಲ್ಲಿ ನಾನು ಮತ್ತೆ ಇರ್ಮಾಗೆ ಹೋಗಿ ಮುಂದಿನ ಪೀಳಿಗೆಯ ಹುಡುಗರಿಗೆ ಆರು ವರ್ಷಗಳ ಕಾಲ ಪಾಠ ಮಾಡುತ್ತಾ ನನ್ನ ಇರ್ಮಾದ ಜೊತೆಗಿನ ಸಂಬಂಧವನ್ನು ತಾಜಾ ಆಗಿ ಇಟ್ಟುಕೊಂಡಿದ್ದೆ.

ಹೀಗಾಗಿ ಇತ್ತೀಚೆಗೆ ಪ್ರಕಟಗೊಂಡ ಕುರಿಯನ್ ಆತ್ಮಕಥನ ಓದಿದ್ದರಿಂದ ನನಗೆ ನನ್ನ ನೆನಪುಗಳನ್ನು ಮರುಜೀವಿಸುವ ಅವಕಾಶವಾಯಿತು. ಆತನ ಜೀವನದ ಅನೇಕ ಘಟನೆಗಳೂ, ವ್ಯಕ್ತಿತ್ವದಲ್ಲಿನ ವಿರೋಧಾಭಾಸಗಳೂ ನನಗೆ ಕಂಡವು. ಕುರಿಯನ್ ತಮ್ಮ ಜೀವನದಲ್ಲಿ ಎಷ್ಟು ನೇರವಾಗಿ ಮಾತಾಡುತ್ತಿದ್ದರೋ ಅಷ್ಟೇ ನೇರವಾಗಿ ಈ ಪುಸ್ತಕವನ್ನು ಬರೆದಿದ್ದಾರೆನ್ನಿಸಿತು. ಬಹಳ ಮಟ್ಟಿಗೆ ಈ ಪುಸ್ತಕ ಅವರ ವೃತ್ತಿಜೀವನಕ್ಕೆ ಸಂಬಂಧಿಸಿದ್ದು. ಅವರ ಖಾಸಗೀ ಜೀವನದ ವಿವರಗಳು ಇದರಲ್ಲಿ ವಿರಳ. ಬಹುಶಃ ಅವರ ಉದ್ದೇಶವೂ ಅದೇ ಆಗಿತ್ತೇನೋ. ಒಂದು ಅತ್ಮೀಯ ಟಿಪ್ಪಣಿಯೊಂದಿಗೆ ಈ ಪುಸ್ತಕವನ್ನು ಆತ ತಮ್ಮ ಮೊಮ್ಮಗನಿಗೆ ಅರ್ಪಿಸಿದ್ದಾರೆ. ಆದರೆ ಆ ಟಿಪ್ಪಣಿಯಲ್ಲೂ ಕುರಿಯನ್ ತಮ್ಮ ದೃಷ್ಟಿಯನ್ನು ತಮ್ಮ ಮೇಲೆಯೇ ಕೇಂದ್ರೀಕರಿಸುವುದನ್ನು ಮರೆಯುವುದಿಲ್ಲ. ಕುರಿಯನ್ ಅಂದರೆ ಅದೇಯೇ -- ಯಾವಾಗಲೂ ಸಹಜಕ್ಕಿಂತ ದೊಡ್ಡದಾಗಿ, ತಮಗಿಷ್ಟಬಂದಂತೆ ತಮ್ಮ ಶರತ್ತಿನ ಮೇಲೆ ಜೀವನವನ್ನು ಕಂಡ, ಜೀವಿಸಿದ ವ್ಯಕ್ತಿ. ಪುಸ್ತಕ ಪ್ರಾರಂಭವಾಗುವುದೇ ಪತ್ರಕರ್ತರೊಬ್ಬರು ಕೇಳುವ ಕುರಿಯನ್ ಅವರೇ ನಿಮ್ಮ ಮುಂದಿನ ಯೋಜನೆಯೇನು ಎಂಬ ಪ್ರಶ್ನೆಯಿಂದ. ಅದಕ್ಕೆ ಕುರಿಯನ್ ಕೊಡುವ ಉತ್ತರ: ನನ್ನ ವಯಸ್ಸಿನವರಿಗೆ ಹೆಚ್ಚು ಭವಿಷ್ಯವಿಲ್ಲ. ಬರೀ ಚರಿತ್ರೆ ಮಾತ್ರ. ಹೀಗೆ ಹೇಳಿದ ವ್ಯಕ್ತಿ ಅದನ್ನು ನಿಜಕ್ಕೂ ನಂಬಿ ಹೇಳಿದರೇ, ಅಥವಾ ಪತ್ರಕರ್ತರಿಗೆ ಇಷ್ಟವಾಗುವ ತಲೆಬರಹವಾಗುವಂತಹ ಅರ್ಥವಿಲ್ಲದ ಒಣ ಮಾತು ಮಾತ್ರ ಅದಾಗಿತ್ತೇ?

ನಮ್ಮ ದೇಶಕ್ಕೆ ಆ ಕಾಲಕ್ಕೆ ಕುರಿಯನ್ ಅವರ ಅವಶ್ಯಕತೆಯಿತ್ತು. ಹಾಗೂ ಆತ ತಮ್ಮ ಪಾತ್ರವನ್ನು ಸೂಕ್ತವಾಗಿಯೇ ನಿಭಾಯಿಸಿದರು. ಆತನ ಜೀವನ ಚದುರಂಗದಲ್ಲಿ ನಿರಂತರವಾಗಿ ನಡೆಸಿದ ಒಂದೊಂದು ಚಲನೆಯೂ ದೇಶದ ಹಾಲು ಉತ್ಪಾದಕರ ಹಿತವನ್ನಿಟ್ಟುಕೊಂಡೇ ನಡೆಸಿದ್ದಾಗಿತ್ತು. ಈ ಚದುರಂಗದ ಚಲನಗಳು ಮಾರುಕಟ್ಟೆಯಲ್ಲಿ ಇತರ ಖಾಸಗೀ ಉತ್ಪಾದಕರೊಂದಿಗೆ ಪೈಪೋಟಿ ನಡೆಸಲು ಆತ ಮಾಡಿರಬಹುದು, ಇಲ್ಲವೇ ಅವರು ಹೆಚ್ಚು ಪ್ರಾಮುಖ್ಯತೆ ಗಳಿಸದಂತೆ ತಮಗೆ ಮಾತ್ರ ಲಭ್ಯವಿದ್ದ ಸರಕಾರದ ಬಲದಿಂದ ಅವರಿಗೆ ಅಡಚಣೆಗಳನ್ನು ಉಂಟುಮಾಡುವುದರಲ್ಲಿ ಆ ಚಲನೆಗಳನ್ನು ಬಳಸಿರಬಹುದು. ಆತ ಜೀವನದುದ್ದಕ್ಕೂ ಸರಕಾರವನ್ನು ವಿಮರ್ಶಿಸುತ್ತಾ, ಸರಕಾರಿ ನೌಕರರನ್ನು ಗೇಲಿ ಮಾಡುತ್ತಾ, ಸ್ವಾಯತ್ತತೆಯ ಸೋಗು ಹಾಕುತ್ತಾ ಸರಕಾರದೊಂದಿಗೆ ಇಲಿಬೆಕ್ಕಿನಾಟ ಆಡಿದರು. ಅದೇ ಸಮಯಕ್ಕೆ ಸರಕಾರದ ಸವಲತ್ತುಗಳನ್ನು ಉಪಯೋಗಿಸಿ ಪೈಪೋಟಿಯನ್ನು ನಪುಂಸಕರನ್ನಾಗಿಸಲು ಪ್ರಯತ್ನವನ್ನೂ ಮಾಡಿದ್ದರು. ಇಡೀ ದೇಶ ಲೈಸೆನ್ಸ್-ಪರ್ಮಿಟ್ ಗಳಿಂದ ಮುಕ್ತಿಪಡದ ಕಾಲದಲ್ಲೂ ಸಕ್ಕರೆ ಮತ್ತು ಹಾಲು [ಮಿಲ್ಕ್ ಅಂಡ್ ಮಿಲ್ಕ್ ಪ್ರಾಡಕ್ಟ್ಸ್ ಆರ್ಡರ್ ಮೂಲಕ] ಉತ್ಪನ್ನದ ವ್ಯವಸ್ಥೆಯ ಎರಡು ಲಾಬಿಗಳು ಸರಕಾರದ ರಕ್ಷಾಕವಚವನ್ನು ಧರಿಸಿನಿಂತಿದ್ದವು. ಈ ಎರಡೂ ಲಾಬಿಗಳು ಸಹಕಾರೀ ರಂಗಕ್ಕೆ ಸೇರಿದ್ದವೆಂಬುದರಲ್ಲಿ ಆಶ್ಚರ್ಯವಿಲ್ಲ.

ಕುರಿಯನ್ ಉದಾತ್ತ ಮನೋಭಾವದ ನಾಯಕರಾದ ವಲ್ಲಭಭಾಯಿ ಪಟೇಲ್, ಮೊರಾರ್ಜಿ ದೇಸಾಯಿ ಮತ್ತು ತ್ರಿಭುವನದಾಸ್ ಪಟೇಲರ ಛತ್ರಛಾಯೆಯಲ್ಲಿ ಕೆಲಸ ಮಾಡಲು ಆರಂಭಿಸಿದ್ದವರು. ಇವರುಗಳಲ್ಲಿ ಮೊದಲಿಬ್ಬರು ರಾಷ್ಟ್ರಮಟ್ಟದ ರಾಜಕೀಯದಲ್ಲಿ ಇದ್ದರಾದ್ದರಿಂದ ಅವರುಗಳ ದೃಷ್ಟಿ ಸಹಜವಾಗಿಯೇ ಗುಜರಾತಿಗಿಂತ ಹಿರಿದಾಗಿತ್ತು.
 ತ್ರಿಭುವನದಾಸ್ ಪಟೇಲರ ಮಹತ್ವ ತಮ್ಮ ಮೇಲೆ ನಂಬಿಕೆಯಿಟ್ಟ ರೈತರ ಹಿತ ಕಾಪಾಡುವುದಲ್ಲದೇ, ಅದನ್ನು ಸಮಂಜಸವಾಗಿ ನಿರ್ವಹಿಸಲು ತಮಗಿರುವ ಮಿತಿಯನ್ನೂ ಕುರಿಯನ್‍ರಲ್ಲಿರುವ ಗುಣವನ್ನು ಗುರುತಿಸುವುದರಲ್ಲಿತ್ತು. ಆತನ ಕೆಳಗೆ ಬೆಳೆದ ಕುರಿಯನ್ ಈ ಗುಣವನ್ನು ಮಿತವಾಗಿ ತಮ್ಮದಾಗಿಸಿಕೊಂಡಿದ್ದರು. ಉದಾಹರಣೆಗೆ ಹಾಲು-ಉತ್ಪನ್ನಗಳ ತಾಂತ್ರಿಕ ಅಂಶಕ್ಕೆ ಅನ್ವಯಿಸುವಂತೆ ಅವರು ತಮ್ಮ ಎಲ್ಲ ನಂಬುಗೆಯನ್ನು ಅವರ ಸಹಚರರಾದ ದಲಾಯಾರಲ್ಲಿ ಹೂಡಿದ್ದರು. ಆದರೆ ದಲಾಯಾರನ್ನು ಬಿಟ್ಟರೆ ತಮ್ಮೊಂದಿಗೆ ಕೆಲಸ ಮಾಡಿದ ಬೇರಾರ ಹೆಸರನ್ನೂ ಕುರಿಯನ್ ತಮ್ಮ ಪುಸ್ತಕದಲ್ಲಿ ಎತ್ತುವುದಿಲ್ಲ. ಒಂದು ಉದ್ದನೆಯ ಮ್ಯಾರಥಾನ್ ರೇಸನ್ನು ಒಂಟಿಯಾಗಿ ಓಡಿದ ಖಿಲಾಡಿಯಂತೆ ಕುರಿಯನ್ ಕಾಣುತ್ತಾರೆ. ರೇಸಿನಂತ್ಯದಲ್ಲಿ ಅಮೃತಾ ಪಟೇಲ್‍ಗೆ ಅವರು ಖೊ ಕೊಟ್ಟಂತೆ ಕಾಣುತ್ತದೆ. ಆದರೆ ಖೊ ಕೊಟ್ಟಕೂಡಲೇ ಕುರಿಯನ್ ಪಕ್ಕದಲ್ಲಿ ನಿಂತು ಆಕೆಯ ಓಟದಬಗ್ಗೆ ಕಾಮೆಂಟರಿ ಕೊಡುತ್ತಾ ನಿಂತುಬಿಡುತ್ತಾರೆ. ಸ್ವಲ್ಪ ಮಟ್ಟಿಗೆ ರೇಡಿಯೋದಲ್ಲಿ ಲಾಲಾ ಅಮರ್ನಾಥ್ ವಿಶೇಷ ಕಾಮೆಂಟರಿ ಕೊಟ್ಟು ಚರಿತ್ರೆಯಲ್ಲಿ ಶರಣು ಪಡೆದಂತೆ ಆತನೂ ಚರಿತ್ರೆಯ ಮೊರೆ ಹೋಗುತ್ತಾರೆ.

ತ್ರಿಭುವನದಾಸ್ ಪಟೇಲ್ ಅಮುಲ್‍ನ ಅಧ್ಯಕ್ಷರಾದದ್ದು ಹೇಗೆಂಬುದರ ಬಗ್ಗೆ ಒಂದು ಆಸಕ್ತಿಕರ ಘಟನೆ ಪುಸ್ತಕದಲ್ಲಿದೆ. ಹಾಲು ಉತ್ಪಾದಕರ ಒಂದು ಸಭೆಯಲ್ಲಿ ಮೊರಾರ್ಜಿಭಾಯಿ ಈ ಸಂಸ್ಥೆಯ ಅಧ್ಯಕ್ಷರಾಗಲು ಯಾರು ತಯಾರಿದ್ದೀರಿ ಅಂತ ಕೇಳಿದರಂತೆ. ಕೆಲ ಜನ ಕೈಯೆತ್ತಿದಾಗ್ಯೂ ತ್ರಿಭುವನದಾಸ್ ಮಾತ್ರ ಸುಮ್ಮನೆ ಮೂಲೆಯಲ್ಲಿ ಕೂತಿದ್ದರಂತೆ. ಮೊರರ್ಜಿಭಾಯಿ ಆತನನ್ನು ಕೇಳಿದಾಗ ತ್ರಿಭುವನದಾಸ್ ಇಲ್ಲ ನನಗೆ ಆಸಕ್ತಿಯಿಲ್ಲ ಅಂತ ಹೇಳಿದರಂತೆ. ತಕ್ಷಣ ಮೊರಾರ್ಜಿಭಾಯಿ ನೀನೇ ಅಧ್ಯಕ್ಷನಾಗು ಅಂತ ಫರ್ಮಾನು ಕೊಟ್ಟರಂತೆ. ಕುರಿಯನ್ ಇದನ್ನು ವಿವರಿಸುತ್ತಾ "ಅಧ್ಯಕ್ಷರಾಗಲೇಬೇಕೆಂದು ತಪನವಿದ್ದ ಮನುಷ್ಯನಿಗೆ ಯಾವುದೋ ಒಂದು ಪೂರ್ವನಿರ್ಧಾರಿತ ಆಸಕ್ತಿಯಿರಬಹುದು ಅನ್ನಿಸಿರಬಹುದು" ಎನ್ನುತ್ತಾರೆ. ಕುರಿಯನ್ ತಮ್ಮ ಜೀನನವನ್ನು ಈ ವಿರೋಧಾಭಾಸದೊಂದಿಗೇ ಜೀವಿಸಿದ್ದಾರೆ. ಒಂದು ಬದಿಯಲ್ಲಿ ರೈತರ ಜೀವನದ ವಿಧಿಯನ್ನು ಅವರುಗಳೇ ನಿರ್ಧರಿಸಿಕೊಳ್ಳಲು ಅನುವು ಮಾಡಿ ಪ್ರಜಾಸತ್ತಾತ್ಮಕ ಸಹಕಾರ ಸಂಘಗಳನ್ನು ಅವರಿಗೆ ಒದಗಿಸಿಕೊಡಬೇಕೆಂಬ ನಂಬುಗೆಯಾದರೆ, ಮತ್ತೊಂದೆಡೆ ಅವರನ್ನು ಇತರ ಸ್ವಹಿತಾಸಕ್ತಿಯಿದ್ದ ದುಷ್ಟರಿಂದ ರಕ್ಷಿಸಬೇಕೆಂಬ ತಹತಹ. ಗುಜರಾತ್ ಹಾಲು ಮಹಾಮಂಡಲದ ಅಧ್ಯಕ್ಷ ಸ್ಥಾನವನ್ನು ಕುರಿಯನ್ ಆಕ್ರಮಿಸಿದ್ದದ್ದು‌ಒಂದು ವಿಚಿತ್ರ ವಿರೋಧಾಭಾಸದ ಸಂತುಲನವಾಗಿತ್ತು. ಕಾರಣ ಆತನಿಗೆ ಹಾಲು ಉತ್ಪಾದಕರ ವಿಷಯದಲ್ಲಿ ಯಾವ ಸ್ವಾರ್ಥಪೂರ್ಣ ಆಸಕ್ತಿ ಇರಲಿಲ್ಲ, ಅದೇ ಸಮಯಕ್ಕೆ ಸಹಕಾರಿ ಸೂತ್ರಗಳ ಪ್ರಕಾರ ಪ್ರಜಾಸತ್ತಾತ್ಮಕವಾಗಿ ಆ ಸ್ಥಾನವನ್ನು ಒಬ್ಬ ಹಾಲು ಉತ್ಪಾದಕ ರೈತ ಆಕ್ರಮಿಸಬೇಕಿತ್ತು ಅನ್ನುವುದೂ ನಿಜ. ರೈತನಿಗೆ 'ಒಳ್ಳೆಯದು ಯಾವುದು' ಮತ್ತು 'ಆ ಬಾಧ್ಯತೆಯನ್ನು ನಿರ್ವಹಿಸಲು ಆತನ ತಯಾರಿ' ಯ ನಡುವಿನ ದ್ವಂದ್ವವೇ ಕುರಿಯನ್‍ರ ವತ್ತಿ ಜೀವನವನ್ನು ನಿರ್ದೇಶಿಸಿದೆ. ಇದು ಪ್ರತಿ ಸರಕಾರಿ ಅಧಿಕಾರಿಯೂ ಬಲಹೀನವರ್ಗದವರಿಗೆ ಹಕ್ಕುಗಳನ್ನು ಒದಗಿಸಲು ಬಯಸಿದಾಗ ಎದುರಿಸುವ ದ್ವಂದ್ವವೇ ಹೌದು. ಈ ನಿಟ್ಟಿನಲ್ಲಿ ಕುರಿಯನ್‍ರ ಪ್ರತಿಕ್ರಿಯೆ [ಅವರು ಸರಕಾರದಾಚೆ ಸರಕಾರದಿಂದ ದೂರ ಎನ್ನುತ್ತಾ ಇದ್ದರೂ] ಇತರ ಒಳ್ಳೆಯ ಸರಕಾರಿ ಅಧಿಕಾರಿಯ ಪ್ರತಿಕ್ರಿಯಗಿಂತ ಭಿನ್ನವಾಗಿರಲಿಲ್ಲ ಎಂಬುದು ಮುಖ್ಯ.

ಕುರಿಯನ್ ಜೀವನ ಸುಖಸಮೃದ್ಧಿಗಳನ್ನು ಎಂದೂ ಕೈ ಬಿಟ್ಟವರಲ್ಲ. ಅದಕ್ಕೆ ಅವರು ಅರ್ಹರಾಗಿದ್ದರು ಅನ್ನುವುದರಲ್ಲೂ ಅನುಮಾನವಿಲ್ಲ. ನಾವು ಅಲ್ಲಿ ವಿದ್ಯಾರ್ಥಿಗಳಾಗಿದ್ದಗ ಆಗಾಗ ಹೋಗಿ ಆತನ ಕಾರಿನ ದರ್ಶನ ಮಾಡಿಕೊಂಡು ಬರುತ್ತಿದ್ದೆವು. ಆಗಿನ ದಿನಗಳಲ್ಲಿ ಆತನ ಬಳಿ ಪೂಜೋ ಕಾರಿತ್ತು. [ಕನ್ನಡದ ಸಂದರ್ಭದಲ್ಲಿ ಇಂಥದೇ ಕಾರನ್ನ ಇಟ್ಟಿದ್ದವರು ಕವಿ ರಾಮಚಂದ್ರ ಶರ್ಮ. ಪೂಜೋ ಅನ್ನುವುದನ್ನ ಹೇಗೆ ಉಚ್ಚಾರ ಮಾಡಬೇಕೆನ್ನವುದನ್ನ ಅವರು ತುಟಿ ಮುಂದೆ ಮಾಡಿ ಗ್ರಾಫಿಕ್‍ ಆಗಿ ವಿವರಿಸುತ್ತಿದ್ದರು.] ಅದರ ಹೆಡ್‍ಲೈಟಿಗೂ ವೈಪರ್ ಇತ್ತು ಅನ್ನುವುದನ್ನ ನಾವು ಬೆರೆಗುಗಣ್ಣುಗಳಿಂದ ನೋಡುತ್ತಿದ್ದೆವು.

ಕುರಿಯನ್‍ ಪುಸ್ತಕದಲ್ಲಿ ವಿವರಿಸಿರುವ ಮೂರು ಘಟನಗಳು ಅವರ ಜೀವನ ಶೈಲಿಗೆ ಕನ್ನಡಿಹಿಡಿದಂತಿದೆ. ಮೊದಲಿಗೆ ಆತ ಆನಂದದಲ್ಲಿ ತಮ್ಮ ಆರಂಭದ ದಿನಗಳ ಬಗ್ಗೆ ಮಾತಾಡುತ್ತಾರೆ [ಪುಟ.೨೧] ಅಲ್ಲಿ ಆತನಿದ್ದ ಒಂದು ಪುಟ್ಟ ಗ್ಯಾರೇಜಿನಲ್ಲಿ ಅವರ ಅಡುಗೆಯವ ಮತ್ತೆ ಬಟ್ಲರ್ ಆದ ಆಂಥೊನಿ ಮಲಿನವಾಗದ ಬಿಳಿ ಬಟ್ಟೆ ತೊಟ್ಟು ದಿನವೂ ಊಟವನ್ನು ಉಣಬಡಿಸುತ್ತಾನೆ. ಗ್ಯಾರೇಜಿನಲ್ಲಿ ಕಾಣಬಹುದಾದ ದೃಶ್ಯ ಇದಂತೂ ಅಲ್ಲವೇ ಅಲ್ಲ. ಆದರೆ ಕುರಿಯನ್ ಇರುವುದೇ ಹಾಗೆ. ಎರಡನೆಯದು ಅದೇ ಪುಟದಲ್ಲಿ "ಆಗಿನ ದಿನಗಳಲ್ಲಿ ನಾನು [ಇದೆಲ್ಲದರಿಂದ ದೂರವಾಗಿ] ಆಗಾಗ ಮುಂಬೈಗೆ ಹೋಗಿ ತಾಜ್ ಹೋಟೇಲಿನಲ್ಲಿ ನಾಲ್ಕಾರು ದಿನ ಆರಾಮವಾಗಿದ್ದು ಬರುತ್ತಿದ್ದೆ" ಅನ್ನುತ್ತಾರೆ. ಮೂರನೆಯ ಘಟನೆಯೆಂದರೆ ಆತ ಎನ್‍ಡಿಡಿಬಿಯ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಾಗ ಅಮೃತಾ ಪಟೇಲ್ ಅಧ್ಯಕ್ಷರ ಕಾರನ್ನು ಗೌರವದ ದ್ಯೋತಕವಾಗಿ ಸ್ವೀಕರಿಸಬೇಕೆಂದು ಹೇಳುವುದು. ಇದಕ್ಕೆ ಕಾರಣ ಒಂದು ಸಣ್ಣ ಘಟನೆ - ಕುರಿಯನ್ ಬೇರೂಂದು ಕಾರಿನಲ್ಲಿ ಆಫೀಸಗೆ ಹೋದಾಗ ಸೆಕ್ಯೂರಿಟಿಯವರು ತಮ್ಮನ್ನು ಹೇಗೆ ಗುರುತಿಸಲಿಲ್ಲ ಎಂಬುದನ್ನು ಮೆಲುಕು ಹಾಕುತ್ತಾರೆ.

ಇದಲ್ಲದೇ ನನಗೆ ಮತ್ತೊಂದು ಘಟನೆಯೂ ನೆನಪಾಗುತ್ತದೆ. ಒಮ್ಮೆ ಕುರಿಯನ್ ನಮ್ಮನ್ನು ಉದ್ದೇಶಿಸಿ ಮಾತಾಡಲು ಇರ್ಮಾಕ್ಕೆ ಬಂದರು. ಅವರು ಬರುವುದಕ್ಕೆ ಮುಂಚೆ ಆ ಕೋಣೆಯನ್ನು ಮಲ್ಲಿಗೆಯ ಸುವಾಸನೆಯ ಪನ್ನೀರಿನಿಂದ ಸಿಂಪಡಿಸಲಾಯಿತು. ಆತ ಒಳಬಂದಕೂಡಲೇ ಮೂಗಿನ ಹೊಳ್ಳೆಗಳನ್ನು ಅಗಲ ಮಾಡಿ ಸುತ್ತಲೂ ನೋಡಿ ಈ ಜಾಗ ಸೂಳೆಯರ ಕೋಠಿಯಂತಿದೆ" ಅಂತಂದು ಅದರ ಪರಿಣಾಮ ಏನಿರಬಹುದೆಂದು ಒಮ್ಮೆ ಇಡೀ ಕೋಣೆಯನ್ನು ಅವಲೋಕಿಸಿ ನಂತರ "ಕೋಠಿಗಳ ವಾಸನೆಯ ಬಗ್ಗೆ ನಿಮಗೇನು ಗೊತ್ತು ಬಡಪಾಯಿ ಮೇಷ್ಟರುಗಳು, ನನ್ನನ್ನು ಕೇಳಿ ಹೇಳುತ್ತೇನೆ".. ಅಂದರು. ಇದು ಕುರಿಯನ್ ಶೈಲಿ. ಎಲ್ಲವನ್ನೂ ಒಂದು ನಾಟಕೀಯ ಸ್ವರೂಪಕ್ಕಾಗಿ ಮಾಡುತ್ತಿದ್ದರು. ತಮ್ಮ ಶ್ರೋತೃಗಳು ಬುದ್ಧಿಜೀವಿಗಳಾಗಲಿ, ಸಾಮಾನ್ಯರಾಗಲೀ, ದೇಶಿಯಾಗಲೀ, ವಿದೇಶಿಯಾಗಲೀ, ರಾಜಕಾರಣಿಗಳಾಗಲೀ, ಅಧಿಕಾರಿಗಳಾಗಲೀ ಶೈಲಯೊಂದೇ.. ಪುಸ್ತಕದಲ್ಲಿರುವ ಕೆಲ ಭಾಗಗಳು ಈ ಕೆಳಕಂಡಂತಿವೆ:

  • ನಾನು ಆತನಿಗೆ ಮಂತ್ರಿಗಳ ಕೋಣೆಯಲ್ಲಿಯೇ ಹೇಳಿದೆ: ಸೂಳೆಮಗನೇ ಇಲ್ಲಿ ಬಂದು ಮಂತ್ರಿಗಳ ಮುಂದೆ ಸುಳ್ಳು ಹೇಳುತ್ತೀಯಾ.. ನಾನು ನಿನ್ನ ಬೀಜ ಕತ್ತರಿಸಿಬಿಡುತ್ತೇನೆ.[ಪುಟ.೭೫]
  • [ಐ‌ಐ‌ಎಂ ಅಹಮಾದಾಬಾದ್‍ನ ಬೋರ್ಡ್ ಮೀಟಿಂಗಿನಲ್ಲಿ ಅಲ್ಲಿನ ವಿದ್ಯಾರ್ಥಿಗಳು ಗ್ರಾಮೀಣ ಕ್ಷೇತ್ರದಲ್ಲಿ ಯಾಕೆ ಕೆಲಸ ಮಾಡುವುದಿಲ್ಲ ಎಂಬ ಅಂಶ ಚರ್ಚೆಯಾಗುತ್ತಿರುವಾಗ] ಒಬ್ಬ ಮಹಾನುಭಾವರು ತನ್ನ ಬಾಯಿಂದ ಸಿಗಾರ್ ತೆಗೆದು ನನ್ನತ್ತ ದುರುಗುಟ್ಟಿ ವ್ಯಂಗ್ಯದಿಂದ 'ಹಾಗಾದರೆ ಡಾ.ಕುರಿಯನ್ ನಮ್ಮ ಹುಡುಗರು ಹೋಗೆ ಹಸುವಿನ ಹಾಲು ಹಿಂಡಬೇಕೆನ್ನುವುದು ನಿಮ್ಮ ಉದ್ದೇಶವೇ?' ಅಂತ ಕೇಳಿದ. ನಾನು ಆತನ ದೃಷ್ಟಿಯನ್ನು ಆತನಿಗೇ ಮರುಳಿಸಿ 'ಇಲ್ಲ ಅವರಿಗೆ ಸಿಗಾರ್ ಚೀಪುವುದು ಹೇಗಂತ ಕಲಿಸುವುದನ್ನೇ ಮುಂದುವರೆಸಿ' ಅಂದೆ. [ಪುಟ ೨೧೨]

ನಮ್ಮ ಘಟಿಕೋತ್ಸವ ಸಂದರ್ಭದಲ್ಲಿ, ಸಾವಿರಾರು ರೈತರ ಎದುರು ನಮ್ಮನ್ನುದ್ದೇಶಿಸಿ ಸ್ವಲ್ಪ ಇಂಗ್ಲಿಷ್ ಸ್ವಲ್ಪ ಹಿಂದಿಯಲ್ಲಿ ಮಾತಾಡಿದ್ದು ಮುಖ್ಯ ಅತಿಥಿ ಉಪ ರಾಷ್ಟ್ರಪತಿ ಶ್ರೀ ಹಿದಾಯತುಲ್ಲಾ. ಆದರ ಕುರಿಯನ್‍ಗೆ ಮಾತ್ರ ತಮ್ಮ ಭಾಷಣದ ಗುಜರಾತಿ ಅನುವಾದ ಯಾರಿಂದಲೋ ಓದಿಸುವ ಭಾಗ್ಯ!

ಕುರಿಯನ್ ಮತ್ತವರ ಶೈಲಿಯೆಂದರೆ ಇದೇನೆ. ಆತನ ದೃಷ್ಟಿಯಲ್ಲಿ ಆತನೆಂದೂ ಸೋಲಲು ಸಾಧ್ಯವೇ ಇರಲಿಲ್ಲ. ಆತನ ಪ್ರಕಾರ ಎಣ್ಣೆ ಬೀಜದ ಕ್ಷೇತ್ರದಲ್ಲಿ ಮಾಡಿದ ಕೆಲಸವೂ ಫಲಕಾರಿಯೇ, ಹಣ್ಣು ತರಕಾರಿ ಮಾರುಕಟ್ಟೆಯಲ್ಲಿ ಮಾಡಿದ ಕೆಲಸವೂ ಫಲಕಾರಿಯೇ, ಅರಣ್ಯದಕ್ಷೇತ್ರದಲ್ಲಿ ಮಾಡಿದ ಕೆಲಸವೂ ಫಲಕಾರಿಯೇ..ಆತ ಸೋಲೊಪ್ಪುವುದು ಒಂದೇ ಕ್ಷೇತ್ರದಲ್ಲಿ - ಅದು ಉಪ್ಪು ತಯಾರಿಸುವವರನ್ನು ಸಂಘಟಿಸುವ ಕ್ಷೇತ್ರದಲ್ಲಿ ಮಾತ್ರ. ಮಾತಿನ ಸಂಭ್ರಮದಲ್ಲಿ ಯುದ್ಧಗಳನ್ನು ಗೆಲ್ಲುವ ಕುರಿಯನ್ ಎಷ್ಟೋಬಾರಿ ತಮ್ಮದೇ ವಿರೋಧಾಭಾಸವನ್ನು ಗುರುತಿಸುವದರಲ್ಲಿ ವಿಫಲರಾಗುತ್ತಾರೆ. ಪುಸ್ತಕದ ಕೆಲ ಭಿನ್ನ ಭಾಗಗಳನ್ನು ನೋಡಿ:

  • ದೆಹಲಿಯಲ್ಲಿ ಫ್ಲೈಯೋವರ್ ಕಟ್ಟುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಹಳ್ಳಿಗಳನ್ನು ತಲುಪುವುದಕ್ಕೆ ರಸ್ತೆಗಳಿಲ್ಲದಿದ್ದಾಗ ಫ್ಲೈ‌ಒವರ್ ಕಟ್ಟುವುದು ಸಮರ್ಪಕವಲ್ಲ. ದೆಹಲಿಯಲ್ಲಿ ಅಂದವಾದ ಫೌಂಟನ್ಗಳನ್ನು ಕಟ್ಟುವುದೂ, ಬಣ್ಣದ ದೀಪ ಹಾಕುವುದರಲ್ಲೇನೂ ತಪ್ಪಿಲ್ಲ. ಎಷ್ಟಾದರೂ ದೆಹಲಿ ಸುಂದರವಾಗಿರಬೇಕು. ಆದರ ನಮ್ಮ ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲದಿದ್ದಾಗ ಇದು ನ್ಯಾಯವಲ್ಲ... [ಟ ೮೩]
  • ಬಡರೈತ ತಾನು ಉತ್ಪಾದಿಸಿದ ಹಾಲೆಲ್ಲವನ್ನೂ ಮನೆಯಲ್ಲಿಟ್ಟುಕೊಳ್ಳದೆ ಮಾರಾಟಮಾಡುವುದು, ಅದರಿಂದಾದ ಸಂಪಾದನೆಯಿಂದ ಇತರ ಅವಶ್ಯ ವಸ್ತುಗಳನ್ನು ಕೊಳ್ಳುವುದು ನಿಜ. [ಅವನು ಹಾಲು ಮಾರಾಟಮಾಡಬಾರದೆಂಬ] ವಾದಗಳೆಲ್ಲಾ ಹಸಿವೆಯಿಂದ ಬಳಲುತ್ತಿರುವ ಮನುಷ್ಯನಿಗೆ ಅರ್ಥಹೀನವೆನ್ನಿಸುತ್ತದೆ. ಅತಿಬಡವರು ತುಟ್ಟಿ ಖಾದ್ಯ ತಿನ್ನಬೇಕೆನ್ನುವುದು ಅರ್ಥಹೀನ ವಾದವಾಗುತ್ತದೆ.. [ಪುಟ ೧೪೭]
ಕುರಿಯನ್ ಅವರ ವಾಕ್ಚಾತುರ್ಯದಿಲ್ಲಿ ಇರುವ ಗೊಂದಲವೇ ಇದು. ಮೊದಲಬಾರಿಗೆ ನಾನು ಬ್ರಾಹ್ಮಣನೊಬ್ಬ ಹರಿಜನನ ಹಿಂದೆ ಲೈನಿನಲ್ಲಿ ನಿಂತದ್ದರಿಂದ ಜಾತಿವ್ಯವಸ್ಥೆಗೆ ಪೆಟ್ಟು ಕೊಟ್ಟಂತೆ ಎಂಬ ಗುಡುಗಿನ ಮಾತು ಕೇಳಿದಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು. ಆದರೆ ಆ ನಂತರ ನಾನು ಹಳ್ಳಿಗಾಡನ್ನು ಸುತ್ತಿಹಾಕಿದಾಗ ಈ ಪ್ರಕ್ರಿಯೆಯಿಂದ ಅಲ್ಲಿನ ಜಾತಿವ್ಯವಸ್ಥೆಗೆ ದೊಡ್ಡ ಬದಲಾವಣೆಯುಂಟಾಗಿಲ್ಲ ಎನ್ನುವುದು ಮನದಟ್ಟಾಯಿತು. ಈಚೆಗೆ ಆ ಬಗ್ಗೆ ಗಹನವಾಗಿ ಆಲೋಚಿಸಿದಾಗ ಅನ್ನಿಸಿದ್ದು - ಅರೇ, ಸಿನೇಮಾ ಲೈನಿನಲ್ಲೂ ಇದೇ ನಿಯಮವನ್ನು ಪಾಲಿಸುತ್ತೇವಲ್ಲ, ಏನಾದರೂ ಬದಲಾವಣೆಯಾಗಿದೆಯೇ? ಹಾಗಾದರೆ ಕುರಿಯನ್ ಹೇಳಿದ್ದು ಹಾಲಿನ ಸಪ್ಲೈಗೆ ಮಾತ್ರ ವರ್ತಿಸಿತ್ತು, ಮಿಕ್ಕ ವಿಷಯಗಳಿಗಲ್ಲ!! ಮಾತಿನ ಚಮತ್ಕಾರ ಒಳ್ಳೆಯ ವಿಚಾರದ ವಾದದ ಮುಂದೆ ಹೆಚ್ಚುಕಾಲ ಕೆಲ್ಲಲು ಸಾಧ್ಯವಿರಲ್ಲ. ದೀರ್ಘ ಕಾಲದಲ್ಲಂತೂ ಈ ಗೆಲುವು ಸಾಧ್ಯವೇ ಇರಲಿಲ್ಲ.

ಎನ್‍ಡಿ‍ಡಿಬಿಯ ಪಾತ್ರದ ಬಗ್ಗೆ ಕ್ಲಾಡ್ ಆಲ್ವರಿಸ್ ಬರೆದ ಲೇಖನದಿಂದಾಗಿ ಒಮ್ಮೆ ಬಿಕ್ಕಟ್ಟಿನ ಪರಿಸ್ಥಿಯಲ್ಲಿದ್ದಾಗ ತಮ್ಮ ಅಧ್ಯಕ್ಷರಿಗೆ ಬೆಂಬಲ ಸೂಚಿಸಲು ೮೦೦ಕ್ಕೂ ಹೆಚ್ಚು ಉದ್ಯೋಗಿಗಳು ರಾಜೀನಾಮೆ ಸಲ್ಲಿಸಿದ್ದರು. ಆಗಿನ ಕಾಲಿಕ್ಕೂ ಇತ್ತೀಚೆಗೆ ಅಮುಲ್‍ನ ಅಧ್ಯಕ್ಷ ಪದವಿಯಿಂದ ಹೊರಬಿದ್ದು ಒಂಟಿಯಾಗಿ ನಡೆದ ಕುರಿಯನ್‍ಗೂ ಸಂಬಂಧವಿದೆಯೇ ಎಂದು ಒಮ್ಮೊಮ್ಮೆ ಯೋಚಿಸುವಂತಾಗುತ್ತದೆ. ಎದುರಿಲ್ಲದ ಮಹಾರಾಜನಂತೆ ಆಳಿದ ಆ ಕುರಿಯನ್ ಎಲ್ಲಿ, ಜೊತೆಯಿಲ್ಲದ ಜೀವಿಯಾಗಿ ಅಡಿಯಿಟ್ಟ ಈ ಕುರಿಯನ್ ಎಲ್ಲಿ? ಎಲ್ಲೋ ತಮ್ಮ ನಂಬಿಕೆಗಳ ಭಾರಕ್ಕೆ ಆತ ಬಲಿಯಾಗಿಬಿಟ್ಟರೆನ್ನಿಸುತ್ತದೆ. ಸಿನೇಮಾದ ಆಕ್ಷನ್ ಹೀರೋ ಪಾತ್ರದಿಂದ ಕ್ಯಾರೆಕ್ಟರ್ ರೋಲ್ ಮಾಡಬೇಕಾದ ಅವಶ್ಯಕತೆಯನ್ನು ಅವರು ಗುರುತಿಸಲೇ ಇಲ್ಲವೇನೋ. ಆತ ದೇವ್ ಆನಂದ್ ದಾರಿಯಲ್ಲಿ ಮುಂದುವರೆದರೇ ಹೊರತು, ಅಮಿತಾಭ್ ಬಚ್ಚನ್ ತುಳಿದ ದಾರಿಯತ್ತ ಒಮ್ಮೆಯೂ ಗಮನ ಹರಿಸಲೇ ಇಲ್ಲ. ಒಂದು ರೀತಿಯಲ್ಲಿ ಕುರಿಯನ್ ತಮ್ಮ ಗುರುಗಳಾದ ತ್ರಿಭುವನದಾಸ್ ಪಟೇಲರಿಂದಾಗಲೀ ರವಿ ಮತ್ಥಾಯ್ ರಿಂದಾಗಲೀ ಕುರ್ಚಿಯ ಮೇಲೆ ಕೂರದೆಯೇ ಆಳುವ ಕಲೆಯನ್ನು ಕೆಲಿಯಲೇ ಇಲ್ಲವೆನ್ನಿಸುತ್ತದೆ. ಇದು ಬಹುಶಃ ಹೋರಾಟಗಾರನ ಲಕ್ಷಣವಿರಬಹುದು. ಎಡಬಿಡದೆ ಸೋಲೊಪ್ಪದೇ ಹೋರಾಡುತ್ತಲೇ ಮುಂದುವರೆಯುವದು.. ತಮ್ಮ ಯೌವನದಲ್ಲಿ ಕೆಲಿತ ಬಾಕ್ಸಿಂಗ್ ಕಲೆ ಅವರನ್ನು ಆವರಿಸಿಬಿಟ್ಟಿತ್ತೇನೋ.

ಕುರಿಯನ್ ಮಹಾಮಾನವನಿಂದ ಮಾನವನ ಸ್ಥರಕ್ಕೆ ಇಳಿಯುತ್ತಿರುವ ಪ್ರಕ್ರಿಯ ನನ್ನ ದೃಷ್ಟಿಗೆ ಬಂದದ್ದು ಕೆಲ ವರ್ಷಗಳ ಕೆಳಗೆ. ಅಷ್ಟು ಹೊತ್ತಿಗೆ ನಾನು ಇರ್ಮಾ ಬಿಟ್ಟು ಐ‌ಐ‌ಎಂ ಸೇರಿದ್ದೆ. ಆಗ ಒಂದು ದಿನ ಆತನದೇ ಹಸ್ತಾಕ್ಷರ ಹೊತ್ತ ಒಂದು ಪತ್ರ ನನ್ನನ್ನು ತಲುಪಿತು. ಅಮೃತಾ ಪಟೇಲ್ ನೆತೃತ್ವದಲ್ಲಿ ಎನ್‍ಡಿಡಿಬಿ ಕೈಗೊಂಡಿದ್ದ ಕೆಲ ಹೊಸ ಯೋಜನೆಗಳನ್ನು - ಅದರಲ್ಲೂ ಸಹಕಾರಿ ಡೈರಿಗಳ ಉತ್ಪನ್ನಗಳನ್ನು ಎನ್‍ಡಿ‍ಡಿಬಿ ಹುಟ್ಟುಹಾಕಿದ ಜೋಡಿಮಾಲೀಕತ್ವದ ಕಂಪನಿಗಳ ಮೂಲಕ ಮಾರಾಟ ಮಾಡುವ ಯೋಜನೆಯನ್ನು ಚರ್ಚಿಸಲು ಒಂದು ವರ್ಕ್‌ಶಾಪ್ ಇರ್ಮಾದಲ್ಲಿ ಏರ್ಪಡಿಸಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆ ಪತ್ರದ ಮೂಲಕ ನನ್ನನ್ನು ಆತ ಆಹ್ವಾನಿಸಿದ್ದರು. ಎರಡು ದಿನಗಳ ನಿರಂತರ ಚರ್ಚೆಯಲ್ಲಿ ನಾವು ಆ ಯೋಜನೆಯ ಒಪ್ಪುತಪ್ಪುಗಳನ್ನು ಅದರ ಪರಿಣಾಮವನ್ನೂ ಚರ್ಚಿಸಿದೆವು. ಅದರಲ್ಲಿ ಭಾಗವಹಿಸಿದ ಎನ್‍ಡಿಡಿಬಿಯ ಪ್ರತಿನಿಧಿ ಕುರಿಯನ್ ಅವರ ಮಾರ್ಗದರ್ಶನದಲ್ಲೇ ತಾವು ನಡೆಯಲು ಸಿದ್ಧರಿರುವುದಾಗಿ, ಅವರ ವಿಚಾರಧಾರೆಗೆ ಧಕ್ಕೆ ಬರುವಂತಹ ಕೆಲಸವನ್ನು ತಾವೇನೂ ಮಾಡುತ್ತಿಲ್ಲವೆಂದೂ ಇಷ್ಟಿಲ್ಲದೇ ಕೇಳಿಕೊಂಡರು. ಎಲ್ಲ ಮುಗಿದ ನಂತರ ಅಲ್ಲಿಗೆ ಕರೆದಿದ್ದಪತ್ರಕರ್ತರನ್ನು ಉದ್ದೇಶಿಸಿ ತಮ್ಮ ಖಾಸಗೀ ವಿಚಾರಗಳನ್ನು ಅದು ಎರಡುದಿನಗಳ ಚರ್ಚೆಯ ಸಾರಾಂಶ ಎನ್ನುವ ಅಭಿಪ್ರಾಯ ಬರುವಂತೆ ಮಂಡಿಸಿದರು. ಆತ ಪತ್ರಕರ್ತರಿಗೆ ಹೇಳಿದ್ದಕ್ಕೂ ಅಲ್ಲಿ ನಡೆದ ಪ್ರಕ್ರಿಯೆಗೂ ಸಂಬಂಧವೇ ಇರಲಿಲ್ಲ. ಅಂದು ನನ್ನ ಹೀರೋ ನನಗೆ ಕೈಕೊಟ್ಟ ಅನುಭವ ನನಗಾಯಿತು. ಆತ ನನ್ನನ್ನು [ಹಾಗೂ ನನ್ನಂತೆಯೇ ಆತನ ಆಹ್ವಾನದ ಮೇರೆಗೆ ಈ ವಿಚಾರವನ್ನು ಚರ್ಚಿಸಲು ಅಲ್ಲಿ ನೆರೆದಿದ್ದ ಎಲ್ಲರನ್ನೂ] ಉಪಯೋಗಿಸಿ ಕೈಬಿಟ್ಟರೆಂದು ನನಗೆ ಅನ್ನಿಸಿತು. ನನ್ನ ಹೆಸರಾಗಲೀ ಅಭಿಪ್ರಾಯವಾಗಲೀ ನಾನು ಮಹತ್ವದ್ದೆಂದು ಭಾವಿಸದಿದ್ದರೂ ಇದು ಮೋಸದ ವರ್ತನೆಯಾಗಿತ್ತು. ನನ್ನ ಕಣ್ಣಲ್ಲಿ ನೀರು ಬಂತು - ಕಾರಣ ಸೂಪರ್‍ಹೀರೋದಂತೆ ಕಾಣುತ್ತಿದ್ದ ಆತ ಕೇವಲ ಸ್ವಹಿತಕ್ಕಾಗಿ ಎರಡು ಮೆಟ್ಟಲಿಳಿಯಲು ಹೇಸದ ಸಾಮಾನ್ಯ ವ್ಯಕ್ತಿ ಮಾತ್ರ ಅಂತ ನನಗನ್ನಿಸಿತು. ಆತ ತಮ್ಮ ಯುದ್ಧವನ್ನು ಕಳಕೊಳ್ಳುತ್ತಿದ್ದರು. ಅದನ್ನು ಸ್ವೀಕರಿಸಲು ಆತ ಸಿದ್ಧರಿರಲಿಲ್ಲ.


ಆದರೆ ಅದಕ್ಕಿಂತ ದುಃಖದ ದಿನ ಮುಂದೆ ಬರಲಿತ್ತು. ಅಮುಲ್‍ನ ಅಧ್ಯಕ್ಷ ಸ್ಥಾನದಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಕಾಲ ವಿಜೃಂಭಿಸಿದ ಆತ ಅಲ್ಲಿನ ಹುದ್ದೆಯನ್ನು ತ್ಯಜಿಸಿದ ದಿನವದು. ಆತ ಆ ಪಟ್ಟದಿಂದ ಇಳಿದ ದಿನ ಗುಜರಾತ್ ಒಕ್ಕೂಟದವರು ಕುರಿಯನ್‍ಗೆ ಇದ್ದ ಸವಲತ್ತುಗಳನ್ನು ಹಾಗೇ ಉಳಿಸುವುದಾಗಿ ಹೇಳಿದರು. ಅದರಲ್ಲಿ ಕುರಿಯನ್ ಉಪಯೋಗಕ್ಕೆ, ಅವರ ಶ್ರೀಮತಿಯವರ ಉಪಯೋಗಕ್ಕೆ ತಲಾ ಒಂದರಂತೆ ಕಾರು, ಮನೆಯ ಅಡುಗೆಯವನು -- ಈ ಎರಡು ಅಂಶಗಳು ಸೇರಿದ್ದವು. ಆದರ ಆತನ ಸಹಾಯಕ ಜೊಸೆಫ್ [ಆತ ಒಕ್ಕೂಟದ ಉದ್ಯೋಗಿ] ಗೆ ಕಲಕತ್ತಾಗೆ ವರ್ಗ ಮಾಡುತ್ತಾ ನಿರ್ದೇಶನ ಪತ್ರವನ್ನಿತ್ತರು. ಜೀವನಪರ್ಯಂತ ಸೇವೆ ಮಾಡಿದವರಿಗೆ ಕೊಡಬಲ್ಲ ಗೌರವಪೂರ್ಣ ವಿದಾಯ ಇದೇನೂ ಅಲ್ಲ. ಆದರೆ ಕುರಿಯನ್ ಅದಕ್ಕೆ ಪ್ರತಿಕ್ರಿಯಿಸಿದ್ದು ಹೇಗೆ? ಇದ್ದ ಇತರ ಸವಲತ್ತುಗಳನ್ನೂ ವಾಪಸ್ಸು ಮಾಡಿ "ಸಾಕಾಯಿತು ಬಿಡಿ, ನಿಮ್ಮ ಯಾವ ಸವಲತ್ತುಗಳೂ ನನಗೆ ಬೇಡ " ಎಂದು ಹೇಳುವುದರ ಮೂಲಕ ತಮ್ಮ ಸಿಟ್ಟನ್ನು ವ್ಯಕ್ತಪಡಿಸಲಿಲ್ಲ. ಬದಲಿಗೆ ಪುಟ್ಟ ಹುಡುಗನೊಬ್ಬ ಚಾಕಲೇಟಿಗೆ ಗೋಗರೆಯುವಂತೆ 'ನನಗೆ ನೀವು ಎಲ್ಲ ಸವಲತ್ತುಗಳನ್ನೂ ಕೊಡುವುದಾಗಿ ಹೇಳಿದ್ದಿರಿ, ಜೋಸೆಫ್ ಆ ಸವಲತ್ತುಗಳ ಭಾಗ ಎಂಬುದನ್ನು ಗಮನಿಸಿ..' ಎಂದು ಪತ್ರ ಬರೆದರು.

ಖಂಡಿತವಾಗಿಯೂ ಯುವರಾಜರು ತಮ್ಮ ಚಕ್ರವರ್ತಿಗಳನ್ನು ಈ ರೀತಿ ನೋಡಲು ಇಷ್ಟಪಡುವ ದೃಶ್ಯವಲ್ಲ. ಚರಿತ್ರೆ ಬರೆಯಲ್ಪಡುವಾಗ ತಮ್ಮ ಕಡೆಯ ವರ್ಷಗಳ ಬೀಳು ಅವರ ಮೊದಲ ಐವತ್ತು ವರ್ಷಗಳ ಅದ್ಭುತ ದೇಣಿಗೆಯನ್ನು ಮರೆಮಾಡದಿರಲಿ. ಯಾರೋ ನನಗೆ ಹೇಳಿದ ನೆನಪು - ಕುರಿಯನ್ ಜೊತೆಗೆ ಬಹಳ ವರ್ಷಗಳ ಕಾಲ ಕೆಲಸ ಮಾಡಿದ ಡಾ.ಚೋಟಾಣಿ ತಮ್ಮ ವಿಳಾಸದಲ್ಲಿ ಕುರಿಯನ್ ಹೆಸರಿರಬೇಕೆಂಬ ಏಕೈಕ ಕಾರಣಕ್ಕಾಗಿ ತಾವು ನಿವಸಿಸುತ್ತಿದ್ದ ತಮ್ಮ ಕಟ್ಟಡವೂ ಆಗ ನಾಮಕರಣಗೊಳ್ಳಲಿದ್ದ ಕುರಿಯನ್ ಎನ್‍ಕ್ಲೇವ್‍ನಲ್ಲಿ ಸೇರಬೇಕೆಂದು ಪೈರವಿ ನಡೆಸಿ ಸಾಧಿಸಿದರಂತೆ. ಇಂಥ ಸಹಚರರಿದ್ದ ಕುರಿಯನ್ ಬೀಳು ಎಷ್ಟು ಕೆಟ್ಟದ್ದಾಗಿದೆ. ಈ ಬೀಳು ಅವರಗೆ ಹೆಚ್ಚು ನೋವನ್ನುಂಟುಮಾಡದಿರಲೆಂದು ಮಾತ್ರ ಆಶಿಸ ಬಹುದೇನೋ
ಇದರ ಇಂಗ್ಲೇಷ್ ಆವೃತ್ತಿಯನ್ನು Writer's BlogK ನಲ್ಲಿ ಕಾಣಬಹುದು


Saturday, June 28, 2008

ಸುಬ್ಬಣ್ಣ



ಕೆಲವು ವಾರಗಳ ಹಿಂದೆ ಶೇಖರ್ ಪೂರ್ಣ ನನ್ನನ್ನು ಸಂಪರ್ಕಿಸಿ ಕೆ.ವಿ.ಸುಬ್ಬಣ್ಣನವರ ಬಗ್ಗೆ ಕನ್ನಡ ಸಾಹಿತ್ಯ.ಕಾಂ ಗಾಗಿ‌ಒಂದು ಲೇಖನವನ್ನು ಬರೆದುಕೊಡಲು ಹೇಳಿದರು. ಆದರೆ ಇದ್ದಕ್ಕಿದ್ದ ಹಾಗೆ ಸುಬ್ಬಣ್ಣನವರ ಬಗ್ಗೆ ನನ್ನನ್ನು ಯಾಕೆ ಬರಯಲು ಕೇಳಿದರೆಂದು ಆಗ ನನಗೆ ಅರ್ಥವಾಗಲಿಲ್ಲ. ಅಹಮದಾಬಾದಿನಲ್ಲಿ ಕೂತಿದ್ದ ನನಗೆ ಸುಬ್ಬಣ್ಣನವರು ತೀರಿಕೊಂಡದ್ದು ತಿಳಿದೇ ಇರಲಿಲ್ಲ. ಹಿಂದಿನ ನನ್ನ ಬರಹದಲ್ಲಿ ನಾನು ಹೇಳಿದ್ದಂತೆ, ಕರ್ನಾಟಕದಿಂದ ದೂರವಾಗಿ ಒಂಟಿಯಾಗಿ ಇರುವುದರ ಫಲಿತವೆಂದರ ಇಂಥಹ ಸುದ್ದಿಗಳು ನಮಗೆ ಒಮ್ಮೊಮ್ಮೆ ತಡವಾಗಿ ತಲುಪುತ್ತದೆ. ಯಾಕೆ ಲೇಖನ ಕೇಳಿದರಂದು ಯೋಚಿಸದಯೇ ನಾನು ಸಾಧ್ಯವಾದರೆ ಬರೆದು ಕೊಡುತ್ತೇನೆ ಎಂದಗು ಒಪ್ಪಿಕೊಂಡೆ. ಆದರೆ ಸಮಯಕ್ಕೆ ಬರೆಯಲಾಗಲಿಲ್ಲ. ಆದರೂ ಅಪ್ಪಟ ಬೆಂಗಳೂರಿಗನಾಗಿ ಸುಬ್ಬಣ್ಣನವರೊಡನೆ ಮಾತನಾಡದೆಯೇ, ಹೆಗ್ಗೋಡಿಗೆ ಒಂದು ಬಾರಿ ಕೂಡಾ ಹೋಗದೇ ಇರುವ ನಾನು ಅವರ ಬಗ್ಗೆ ಬರೆಯಲು ಹೇಗೆ ಒಪ್ಪಿಕೊಂಡೆ ಅಂತ ನನಗೇ ಆಶ್ಚರ್ಯವಾಯಿತು. ಆದರೆ ನನಗೆ ತಿಳಿದದ್ದು ಇಷ್ಟು - ನಾನು ಪ್ರತಿಸ್ಪಂದಿಸುತ್ತಿದ್ದದ್ದು ಸುಬ್ಬಣ್ಣ ಎಂಬ ವ್ಯಕ್ತಿಗಲ್ಲ, ಸುಬ್ಬಣ್ಣ ಎಂಬ ವಿಚಾರಧಾರೆಯ ಕ್ರಮಕ್ಕೆ.

ನನಗೆ ಸುಬ್ಬಣ್ಣನವರ ಪರಿಚಯ ಇಲ್ಲದಿರುವುದಕ್ಕೆ, ಹೆಗ್ಗೋಡಿಗೆ ನಾನು ಹೋಗದಿರುವುದಕ್ಕೆ ಯಾರೂ ಕಾರಣರಲ್ಲ. ಎಲ್ಲಕ್ಕೂ ಒಂದು ಪರಿಸ್ಥಿತಿ ಒದಗಿ ಬರಬೇಕು, ಅದರ ಅದೃಷ್ಟ ನನಗಿರಲ್ಲಿಲ್ಲ ಅಷ್ಟೆ. ಆದಮಾತ್ರಕ್ಕೆ ಸುಬ್ಬಣ್ಣ ಎಂಬ ವಿಚಾರದಿಂದ ಕನ್ನಡಿಗರು ಎಂದೂ ದೂರವಾಗುವುದಕ್ಕೆ ಸಾಧ್ಯವಿಲ್ಲ. ಕನ್ನಡ ಓದು/ಬರಹಕ್ಕೆ ಸ್ವಲ್ಪಮಟ್ಟಿಗೆ ಹೊರಗಿನವನಾದ ನನಗೆ - ಸಾಹಿತ್ಯದ ಮೊದಲ ಪಾಠಗಳು ಅಕ್ಷರ ಪ್ರಕಾಶನದಿಂದ ದೊರತವು. ನಾನು ಸ್ಕೂಲಿನಲ್ಲಿ ಕಲಿತದ್ದು ಸಂಸ್ಕೃತ ಮತ್ತು ಇಂಗ್ಲಿಷ್. ಕಾಲೇಜಿಗೆ ಬರುವ ವೇಳೆಗೆ ಕಲಿತಿದ್ದ ಒಂದಿಷ್ಟು ಕನ್ನಡವೂ ಮರೆಯುವ ಸ್ಥಿತಿಯಲ್ಲಿದ್ದಾಗ ನನ್ನನ್ನು ತಿರುಮಲೇಶರ (ಮುಖವಾಡಗಳು, ವಠಾರ, ಮುಖಾಮುಖಿ) ಕಾವ್ಯಕ್ಕೆ ಪರಿಚಿಯಿಸಿದವರು ಕಾಲೇಜಿನ ಕನ್ನಡ ಮೇಷ್ಟ್ರು ರಾಮರಾವ್ ಕುಲಕರ್ಣಿಯವರು. ಕ್ರಮಕ್ರಮವಾಗಿ ಕನ್ನಡ ಪುಸ್ತಕಗಳನ್ನು ಓದುತ್ತಾ ಹೋದಂತೆ ಅಕ್ಷರ ಪ್ರಕಾಶನದ ಹೆಸರು ನನ್ನ ಮನಸ್ಸಿನಲ್ಲಿ ಸ್ಥಾಯಿಯಾಗುತ್ತಾ ಹೋಯಿತು. ಅಕ್ಷರ ಪ್ರಕಾಶನದ ಪುಸ್ತಕಗಳೆಂದರೆ ಮನಸ್ಸಿಗೆ ನಾಲ್ಕಾರು ವಿಚಾರಗಳು ಬರುತ್ತಿದ್ದವು:

  • ಬೇರೆ ಯಾರೂ ಪ್ರಕಟಿಸಲು ಸಾಧ್ಯವಾಗದಂತಹ ಪುಸ್ತಕಗಳನ್ನು ಅವರು ಹೊರತರುತ್ತಿದ್ದರು (ಅಂದರೆ, ಯಾವುದು ಒಳ್ಳೆಯ ಸಾಹಿತ್ಯವಾಗಬಹುದೆಂಬ ವಿಚಕ್ಷಣಾ ವಿವೇಕ ಅವರಲ್ಲಿತ್ತು)
  • ಬೇರೆ ಯಾರೂ ಪ್ರಕಟಿಸಲು ಒಪ್ಪದಂತಹ ಪುಸ್ತಕಗಳ್ಳನ್ನು ಅವರು ಹೊರತರುತ್ತಿದ್ದರು (ಅಂದರೆ, ಆ ಪುಸ್ತಕದ ಮೇಲೆ ಹಾಕಿದ ಹಣ ವಾಪಸ್ಸು ಬರುತ್ತದೆಯೋ ಇಲ್ಲವೋ ಎಂಬ ಪರಿವೆ ಅಕ್ಷರ ಪ್ರಕಾಶನಕ್ಕಿದ್ದಂತಿರಲಿಲ್ಲ).
  • ಪುಸ್ತಕ ಪ್ರಕಟಿಸುವುದು ಮುಖ್ಯವೇ ಹೊರತು ಅದನ್ನು ಮಾರಾಟ ಮಾಡುವ ಪ್ರಕ್ರಿಯೆ ಅಷ್ಟು ಮುಖ್ಯವಾಗಿ ಅವರಿಗೆ ಕಂಡಂತಿರಲಿಲ್ಲ. ಹೀಗಾಗಿ ಪುಸ್ತಕದ ಅಚ್ಚು ಮುಖಪುಟ ಇತ್ಯಾದಿ ಅಷ್ಟಕಷ್ಟೆ ಆಗಿರುತ್ತಿತ್ತು.
  • ಅವರ ಪುಸ್ತಕಗಳು ಎಲ್ಲ ಪುಸ್ತಕದಂಗಡಿಗಳಲ್ಲಿ ದೊರಕುತ್ತಿರಲ್ಲಿಲ್ಲ - ಅದನ್ನು ಪಡೆಯಬೇಕೆಂದವರು - ಸ್ವಲ್ಪ ಹೆಚ್ಚಿನ ಪ್ರಯತ್ನ ಮಾಡಬೇಕಿತ್ತು (ದೇವರನ್ನು ಪಡೆಯಲು ಭಕ್ತಾದಿಗಳು ನಾನಾ ತೊಂದರೆ ಪಡುವಂತೆ).
  • ಅಕ್ಷರ ಪ್ರಕಾಶನದಲ್ಲಿ ಪ್ರಾರಂಭಿಸಿದ ಅನೇಕ ಲೇಖಕರು ಬೇರೆ ಪ್ರಕಾಶಕರನ್ನು ಹಿಡಿದು ಹೊರಟುಬಿಡುತ್ತಿದ್ದರು, ಆದರೆ ಅಕ್ಷರ ಪ್ರಕಾಶನದ ಪುಸ್ತಕ ಪ್ರಕಾಶನದ ಚಟುವಟಿಕೆ ಎಂದಿಗೂ ಕಡಿಮೆಯಾಗಲಿಲ್ಲ.
  • ಹೀಗಾಗಿ ಅಕ್ಷರ ಪ್ರಕಾಶನದವರ ಪುಸ್ತಕಗಳ ಯಾದಿಯಲ್ಲಿ ಹೆಚ್ಚು ಕವಿತೆಗಳ ಸಂಕಲನ, ನಾಟಕ, ಕಥೆ, ವಿಮರ್ಶೆ- ವಿಚಾರಧಾರೆ, ಮತ್ತು ಕಟ್ಟ ಕಡೆಯದಾಗಿ ಕಾದಂಬರಿಗಳನ್ನು ಕಾಣಬಹುದು ಅಂತ ನನಗನ್ನಿಸುತ್ತದೆ.

ಮಾರಾಟ, ಹಣದ ಬಗ್ಗೆ ಅಷ್ಟು ಪರಿವೆಯಿಲ್ಲದ ಹೊಸ ಲೇಖಕರಿಗೆ ಅಕ್ಷರ ಪ್ರಕಾಶನದಿಂದ ಪುಸ್ತಕ ಪ್ರಕಟವಾಯಿತೆಂದರೆ ಅದಕ್ಕೆ "ಸಹಿತ್ಯಿಕ ಗುಣಮಟ್ಟ"ದ ಒಂದು ಛಾಪು ಬಿದ್ದಂತೆಯೇ ಆಗಿತ್ತು. (ಮಾರಾಟ, ಹಣದ ಪರಿವೆಯಿದ್ದ ಕನ್ನಡ ಲೇಖಕರನ್ನು ಹುಡುಕುವ ಪ್ರಯಾಸಕ್ಕೆ ಕೈ ಹಚ್ಚದಿರುವುದೇ ಒಳ್ಳೆಯದೆಂಬುದು ನನ್ನ ಅಭಿಪ್ರಾಯ). ಬರವಣಿಗೆ ಪ್ರಾರಂಭ ಮಾಡಿದ್ದ ನನಗೆ ಇದೊಂದು ಕನಸಾಗಿತ್ತು (ಹಾಗೂ ಕನಸಾಗಿಯೇ ಉಳಿದಿದೆ). ಇದಕ್ಕೆ ಸ್ವಲ್ಪ ಭೂಗೋಳಿಕ ಕಾರಣಗಳೂ ಇರಬಹುದು. ಉತ್ತರ ಕರ್ನಾಟಕದಲ್ಲಿ ಕಣ್ಣು ತೆರೆಯುತ್ತಿದ್ದ ಬರಹಗಾರರಿಗೆ ಮನೋಹರ ಗ್ರಂಥ ಮಾಲಾ ಇತ್ತು. ಬೆಂಗಳೂರಿಗರಿಗೆ ಬಂಧುವಾಗಿ ಕ್ರೈಸ್ಟ್ ಕಾಲೇಜಿನ ಶ್ರೀನಿವಾಸರಾಜು ಇದ್ದರು. ಹೀಗಾಗಿ ನಮ್ಮಲ್ಲಿ ಕೆಲವರು ಅಕ್ಷರ ಪ್ರಕಾಶನದ ಕನಸು ಹೊತ್ತು ಓಡಾಡಿದರೂ ಹೆಚ್ಚು ಪ್ರಯತ್ನ ಮಾಡಲಿಲ್ಲ ಅನ್ನಿಸುತ್ತದೆ.

ಇಲ್ಲಿ ಮತ್ತೊಂದು ಗಮ್ಮತ್ತಿನ ವಿಷಯ ಹೇಳಬೇಕು - ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದಾಗ ರಾಮ್ ಗುಹಾರನ್ನು ಭೇಟಿಯಾಗಲು ಅವರ ಮನೆಗೆ ಹೋದೆ - ರಾಮ್ ನನಗೆ ತಮ್ಮ ಕನ್ನಡ ಪುಸ್ತಕವೊಂದನ್ನು ಕೊಟ್ಟರು. ನನಗೆ ಈ ಪುಸ್ತಕ ಇಂಗ್ಲೀಷಲ್ಲಿ ನೋಡಿದ ನೆನೆಪಾಗಲಿಲ್ಲ. ರಾಮ್ ಗೆ ಕನ್ನಡ ಬರುವುದಿಲ್ಲ... ಆದರೆ, ರಾಮ್ ಹೆಸರಿನಲ್ಲಿ ಅಕ್ಷರ ಪ್ರಕಾಶನದ ಕನ್ನಡ ಪುಸ್ತಕ ಬಂದದ್ದು ಹೇಗೆ? ಅದಕ್ಕೆ ರಾಮ್ ಉತ್ತರ ಗಮ್ಮತ್ತಿನದಾಗಿತ್ತು... ಕೆಲವು ವರ್ಷಗಳ ಹಿಂದೆ, ಡಿ.ಆರ್.ನಾಗರಾಜರ ಒತ್ತಾಯದ ಮೇರೆಗೆ - ಅಕ್ಷರ ಪ್ರಕಾಶನದಿಂದ ಹೊರಬರುತ್ತಿದ್ದ (ಡಿ.ಆರ್ ಸಂಪಾದಿಸುತ್ತಿದ್ದ) ಪರಿಸರ ಮಾಲೆಗಾಗಿ ಪ್ರತ್ಯೇಕವಾಗಿ ಈ ಪುಸ್ತಕವನ್ನು ಬರೆಯಲಾಯಿತಂತೆ. ಭಾಷೆ ಬರದ, ಕೇವಲ ಬರಹದಿಂದಲೇ ಜೀವನ ನಡೆಸುವ, (ಅದರಲ್ಲೂ ಪತ್ರಕರ್ತರಲ್ಲದ, ಕಾದಂಬರಿಕಾರರಲ್ಲದ, ಕೇವಲ ಚರಿತ್ರೆ, ಪರಿಸರ, ಕ್ರಿಕೆಟ್ ಮೇಲೆ ಮಾತ್ರ ಪರಿಶೋಧನಾತ್ಮಕ ಬರಹ ಬರೆಯುವ ಫುಲ್ ಟೈಂ ರೈಟರ್) ಕೈಯಲ್ಲಿ ಈ ಬರವಣಿಗೆ ಮಾಡಿಸಬೇಕೆಂದರೆ ಇದು ಪ್ರಕಾಶನದ ವಾಣಿಜ್ಯದಿಂದ ಆಗುವ ಮಾತಲ್ಲ; ಬದಲಿಗೆ ಇದು ಸಂಸ್ಕೃತಿಯ ಬಗೆಗಿನ ಅಪಾರ passionನಿಂದ ಆಗುವ ಮಾತು. (ಸ್ವತಂತ್ರವಾಗಿ ಪರಿಶೋಧಕ, ಓದುಗ, ಬೆಂಗಳೂರಿಗ ರಾಮಚಂದ್ರ ಗುಹಾ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ). ಈ ಪ್ರಕರಣದಲ್ಲಿ ಸುಬ್ಬಣ್ಣನವರ ಸ್ವಂತ ಕೈವಾಡ ಇದ್ದಿರಲಿಕ್ಕಿಲ್ಲ. ಇದು ಸುಬ್ಬಣ್ಣನವರ ವಿಚಾರಧಾರೆಯನ್ನು ಅಂತರ್ಗತ ಮಾಡಿಕೊಂಡ ಒಂದು ಸಂಸ್ಥೆಯ ಪ್ರತೀಕ. ವ್ಯಕ್ತಿ ಕೇಂದ್ರಿತ ಪ್ರಯಾಸಗಳಿಗೂ ಸಂಸ್ಥಾ ಕೇಂದ್ರಿತ ಪ್ರಯಾಸಗಳಿಗೂ ಇರುವ ವ್ಯತ್ಯಾಸ ಇದೇಯೆ. ಶ್ರೀನಿವಾಸ ರಾಜು ಪ್ರಕಾಶನರಂಗದಲ್ಲಿ ಮಾಡಿದ ಕಾರ್ಯಕ್ಕೂ ಸುಬ್ಬಣ್ಣನವರ ಕೆಲಸಕ್ಕೂ ಇರುವ ಅಂತರ ಇಲ್ಲಿ ತಿಳಿಯುತ್ತದೆ.

ಆದರೆ ಪುಸ್ತಕ ಪ್ರಕಾಶನಕ್ಕೆ-ಸುಬ್ಬಣ್ಣನವರಿಗೆ ಕೊಂಡಿ ಹಾಕಿ ಅಷ್ಟಕ್ಕೇ ಸೀಮಿತಗೊಳಿಸಿಬಿಟ್ಟರೆ ನಾವು ಸುಬ್ಬಣ್ಣನವರ ನೆನಪಿಗೆ ಘೋರ ಅನ್ಯಾಯ ಮಾಡಿದಂತಾಗುತ್ತದೆ. ಏಕೆಂದರೆ ಸುಬ್ಬಣ್ಣನವರು ಒಟ್ಟಾರೆ ಒಂದು ಕಲ್ಚರಲ್ ಪ್ಯಾಕೇಜ್ ಆಗಿ ನಮ್ಮೆದುರಿಗಿದ್ದರು. ಬಹುಶಃ ಇಂದಿಗೂ ನೀನಾಸಂ ಕರ್ನಾಟಕದ ಏಕಮಾತ್ರ ರೆಪರ್ಟರಿ ಅನ್ನಿಸುತ್ತದೆ. ಸಾಮಾನ್ಯವಾಗಿ ಸರಕಾರಿ ಸಂಸ್ಥೆಗಳು ಮಾಡುವ ಕೆಲಸವನ್ನು ನೀನಾಸಂ ಮಾಡುತ್ತಿತ್ತು. ಉದಾಹರಣೆಗೆ - ನಾಟಕದಲ್ಲಿ ತರಬೇತಿ, ಹಾಗೂ ರಾಜ್ಯಾದ್ಯಂತ ಪ್ರದರ್ಶನ ಮಾಡಲು ಆರ್ಥಿಕ ಬಲ ಸರಕಾರಕ್ಕೆ ಮಾತ್ರ ಇರುತ್ತದೆ. ನಾವು ಯಾವುದೇ ರಂಗದಲ್ಲಿ ನೋಡಿದರೂ ಇದು ನಿಜ. ನಾಟಕಕ್ಕೆ ರಾಷ್ಟ್ರಮಟ್ಟದಲ್ಲಿ ಎನ್.ಎಸ್.ಡಿ, ರಾಜ್ಯಮಟ್ಟದಲ್ಲಿ ರಂಗಾಯಣ ಇರುವಂತೆ, ಸಿನೆಮಾಗೆ FTII ಇರುವಂತೆ, ಕಲೆಗೆ ಅಕಾದಮಿಗಳು ಇದ್ದಂತೆ.

ನೀನಾಸಂ ನಾಟಕಗಳನ್ನು ಆಡಿಸುವ ಉತ್ಸಾಹದಲ್ಲಿ ಎಷ್ಟೊಂದು ಹೊಸ ನಾಟಕಗಳನ್ನು ಕನ್ನಡಕ್ಕೆ ತಂದಿದೆ - (ಅದು ಅನುವಾದವೇ ಇರಬಹುದು, ಹೊಸ ನಾಟಕವೇ ಇರಬಹುದು) - ಎನ್ನುವ ಲೆಕ್ಕ ಯಾರೂ ಇಟ್ಟಿಲ್ಲ. ಭಾಷೆಯ ಆಧಾರದ ಮೇಲೆಯೇ ಒರಗಿರುವ ಬರ್ನಾರ್ಡ್ ಷಾ ಅವರ Pygmallion ನಂತಹ ನಾಟಕವನ್ನು ಕನ್ನಡಕ್ಕೆ ತರಬೇಕು ಎಂಬ ವಿಚಾರ, ಅದನ್ನು ಮಾಡಬಲ್ಲ ವ್ಯಕ್ತಿ ಜಯಂತ ಕಾಯ್ಕಿಣಿ ಎಂದು ಗುರುತಿಸುವ ವಿಚಕ್ಷಣಾ ವಿವೇಕ ಇತರ ಯಾವುದೇ ಸಾಂಸ್ಕೃತಿಕ ಪ್ರಯಾಸದಿಂದ ಬರಲಾರದು. ಈ ವಿಚಾರಧಾರೆಯೇ ಸುಬ್ಬಣ್ಣನವರ ದೇಣಿಗೆ.

ಖಾಸಗೀ ಸಂಸ್ಥೆಗಳು ಇಂಥಹ ಚಟುವಟಿಕೆಗಳನ್ನು ಕೈಗೊಳ್ಳುವುದು ಸಾಮಾನ್ಯವಲ್ಲ. ಎಂಬತ್ತರ ದಶಕದಲ್ಲಿ ಸಿ.ಜಿ.ಕೆ - ಒಂದು ರೆಪರ್ಟರಿ ಮಾಡುವ ತಯಾರಿಯಲ್ಲಿ ರಂಗನಿರಂತರ ಆಯೋಜಿಸಿ ೧೫೦ ದಿನಗಳ ಕಾಲ ನಾಟಕಗಳನ್ನು ಮಾಡಿಸಿದ್ದರು. ಆದರೆ ಅಲ್ಲಿಂದ ಮುಂದಕ್ಕೆ ಅವರಿಗೆ ಅದನ್ನು ಕೊಂಡೊಯ್ಯಲು ಸಾಧ್ಯವಾಗಲೇ ಇಲ್ಲ. ರಂಗನಿರಂತರದ ದಿನಗಳನ್ನು ಈಗ ನೆನಪು ಮಾಡಿಕೊಂಡರೆ, ಸಿ.ಜಿ.ಕೆ ಪಣ ಕಟ್ಟಿ ಹತ್ತು ದಿನ ಎಡೆಬಿಡದೇ ಸೈಕಲ್ ಓಡಿಸಿ ಲಿಮ್ಕಾ ರಿಕಾರ್ಡ್ ಸ್ಥಾಪಿಸಿದ ಒಂಟಿ ಖಿಲಾಡಿಯಂತೆ ಕಾಣುತ್ತಿದ್ದರೆನ್ನಿಸುತ್ತದೆ. ಆದರ ಆ ದಿನಗಳಲ್ಲಿ ಅವರ ಇರ್ದ್ ಗಿರ್ದ್ ಸುತ್ತುತ್ತಿದ್ದ ನಮಗೆ ಇದು ಬಹಳ ದೊಡ್ದ ಸಾಧನೆ ಅನ್ನಿಸಿತ್ತು. ಬಹುಶಃ ಸಿ.ಜಿ.ಕೆ.ಗೆ ಆರ್ಥಿಕ ಸವಲತ್ತುಗಳಿದ್ದಿದ್ದರೆ ಅವರು ಒಂದು ರೆಪರ್ಟರಿಯನ್ನು ಸ್ಥಾಪಿಸುತ್ತಿದ್ದರೋ ಏನೋ.. ಇಲ್ಲಿ ಹೇಳಬೇಕಾದ ಮುಖ್ಯ ವಿಷಯವೆಂದರೆ, ನೀನಾಸಂ ನಂತಹ ಸಂಸ್ಥೆಯನ್ನು ನಡೆಸುವುದು ಕೇವಲ ಒಂದು ಹವ್ಯಾಸವಾಗಿ ಮಾಡಲು ಆಗುವಂತಹದ್ದಲ್ಲ.

ಸುಬ್ಬಣ್ಣ ವಯಕ್ತಿಕವಾಗಿ ಅಥವಾ ಚಿತ್ರಗಳ ಮಾಧ್ಯಮದಲ್ಲಿ ಹೆಚ್ಚು ಕಾಣಿಸುತ್ತಿದ್ದ ವ್ಯಕ್ತಿಯಲ್ಲ. ಸೆಮಿನಾರುಗಳಲ್ಲಿ ಭಾಷಣ ಮಾಡಿದ್ದನ್ನು ಕಂಡದ್ದೂ ಕಡಿಮೆ. ಪ್ರಪಂಚ ಸುತ್ತುವ ಖಯಾಲಿ ಇದ್ದ ವ್ಯಕ್ತಿಯಂತೆ ಎಂದಿಗೂ ಕಂಡುಬಂದಿರಲ್ಲಿಲ್ಲ. ಆದರೆ, ಪ್ರಪಂಚವನ್ನೇ ಹೆಗ್ಗೋಡಿಗೆ ಕರೆಸುವ ರೀತಿ ಸುಬ್ಬಣ್ಣನವರಿಗೆ ಗೊತ್ತಿತ್ತು. ಸಂಸ್ಥೆಯೊಂದನ್ನು ವ್ಯಕ್ತಿಕೇಂದ್ರಿತವಾಗಿ ಕಟ್ಟದೇ ಚಟುವಟಿಕೆಗಳನ್ನು ಕೇಂದ್ರವಾಗಿ ಮಾಡಿಕೊಂಡು ಮುಂದುವರೆದರೆ ಏನೆಲ್ಲಾ ಸಾಧಿಸಬಹುದೆಂಬುದಕ್ಕೆ ಸುಬ್ಬಣ್ಣ ಒಂದು ಉದಾಹರಣೆಯಂತಿದ್ದರು.

ನನಗೆ ತಿಳಿದ ಮಟ್ಟಿಗೆ ಪೂನಾದ FTII ಬಿಟ್ಟರೆ, ಒಳ್ಳೆಯ ಸಿನೆಮಾವನ್ನು ಅರ್ಥಮಾಡಿಕೊಳ್ಳಲು ನಡೆಸುವ ಶಿಬಿರವನ್ನು ಕೈಗೊಳ್ಳುವುದು ಹೆಗ್ಗೋಡಿನಲ್ಲಿ ಮಾತ್ರ. ಈಗ FTII ಎಷ್ಟು ಸಕ್ರಿಯವಾಗಿಯಿದೆಯೋ ನನಗೆ ತಿಳಿಯದು. ಮ್ಯಾಗಸಸೆ ಪ್ರಶಸ್ತಿ ಬಂದಾಗ ಸುಬ್ಬಣ್ಣನವರು, ತಮ್ಮ ವ್ಯಕ್ತಿತ್ವದ ವಿಕಾಸದಲ್ಲಿ ಯು.ಆರ್.ಅನಂತಮೂರ್ತಿಯವರದ್ದು ಬಹಳ ದೊಡ್ದ ಪಾತ್ರ ಎಂದು ಹೇಳಿದ್ದರು. ಈಗ ಅನಂತಮೂರ್ತಿಯವರು FTIIನ ಚೇರ್ಮನ್ ಆಗಿದ್ದಾರೆ. ಸುಬ್ಬಣ್ಣನವರ ಗೆಳೆಯರಾದ ಅನಂತಮೂರ್ತಿಯವರು FTIIಯನ್ನು ಹೆಗ್ಗೋಡು ಮಾಡಬಲ್ಲರೆ? ಸುಬ್ಬಣ್ಣನವರ ನೆನಪಿಗೆ ಇದಕ್ಕಿಂತ ಒಳ್ಳೆಯ ಕಾಣಿಕೆ ಏನಿರಬಹುದು?